ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯ ಅಭಿಮಾನಕ್ಕೆ ಪ್ರೀತಿಯ ‘ಅಪ್ಪು’ಗೆ

ರಾಜಕುಮಾರ್ ನಟನೆಯ ಚಿತ್ರ ನೋಡುತ್ತ ಪ್ರಾಣಬಿಟ್ಟ ಪತಿಯ ಸಂಗತಿ ತಿಳಿಸಿದ ಅಜ್ಜಿ
Last Updated 9 ನವೆಂಬರ್ 2020, 20:00 IST
ಅಕ್ಷರ ಗಾತ್ರ

ಕಾರವಾರ: ‘ನನ್ನೆಜಮಾನ್ರು (ಪತಿ) ಡಾ.ರಾಜ್‌ಕುಮಾರ್ ಸಿನಿಮಾ ನೋಡ್ತನೇ ಪ್ರಾಣ ಬಿಟ್ರು. ಆ ವಿಚಾರಾನಾ ನಾನು ಪುನೀತ್‌ ರಾಜ್‌ಕುಮಾರ್‌ಗೆ ಹೇಳ್ಬೇಕಿತ್ತು. ಪೊಲೀಸರ ಜತೆ ಗುದ್ದಾಡಿ, ಭೆಟ್ಟಿ ಮಾಡಿ ಹೇಳ್ಬಂದೀನಿ..’

ಹೆಮ್ಮೆ, ಅಭಿಮಾನದಿಂದ ಹೀಗೆಂದವರು ಜೊಯಿಡಾದ ಗೌಡೇವಾಡದ ಹಿರಿಯ ಮಹಿಳೆ ಕರಿಯವ್ವ ಬಾಳೆಗೌಡ ನಾಯ್ಕ. ಕೆಲವು ದಿನಗಳಿಂದ ಜೊಯಿಡಾದ ಸುತ್ತಮುತ್ತ ಚಿತ್ರೀಕರಣದಲ್ಲಿ ನಿರತಾಗಿದ್ದ ನಟ ಪುನೀತ್ ರಾಜಕುಮಾರ್ ಅವರನ್ನು, ಜೊಯಿಡಾದ ಸರ್ಕಾರಿ ಅತಿಥಿ ಗೃಹದಲ್ಲಿ (ಐ.ಬಿ) ನ.7ರಂದು ಸಂಜೆ ಭೇಟಿ ಮಾಡಿ ತಮ್ಮ ಪತಿಯ ವಿಚಾರವನ್ನು ವಿವರಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕರಿಯವ್ವ, ‘ನನ್ ಗಂಡ ಬಾಳೆಗೌಡ ಮಲ್ಕಪ್ಪ ನಾಯ್ಕ ಅವ್ರಿಗೆ ಡಾ.ರಾಜ್‌ಕುಮಾರ್ ಮೇಲೆ ಭಾರಿ ಅಭಿಮಾನ. ಸುಮಾರು 12 ವರ್ಷದ ಹಿಂದೆ ಟೀವೀಲಿ, ಅಣ್ಣಾವ್ರ ಪಿಚ್ಚರ್ ಕವಿರತ್ನ ಕಾಳಿದಾಸ ನೋಡ್ಕ್ಯಂತ ಕುಂತಿದ್ರು. ಹಂಗೇ ನೋಡ್ತ ನೋಡ್ತನೇ ಪ್ರಾಣ ಬಿಟ್ರು...’ ಎನ್ನುತ್ತ ಒಂದು ಕ್ಷಣ ಮೌನವಾದರು.

‘ನಮ್ಮ ಮೂಲ ಬೆಳಗಾವಿರೀ. ಅಲ್ಲಿದ್ದಾಗ ಗೋಕಾಕ ಚಳವಳಿ ಜೋರಾಗಿತ್ತು. ನನ್ನ ಗಂಡ ಡಾ.ರಾಜ್‌ಕುಮಾರ್ ಅವ್ರನ್ನ ಅಲ್ಲಿ ನೋಡಿದ್ರು. ನಂತ್ರ ಅವ್ರ ಮ್ಯಾಲ ತುಂಬಾನೇ ಅಭಿಮಾನ ಬಂತು. ಅವ್ರದ್ದಲ್ಲೇ ಮತ್ಯಾರದ್ದೂ ಪಿಚ್ಚರ್ ನೋಡ್ತಿರ್ಲಿಲ್ಲ. ನಾವು ಸುಮಾರು 40 ವರ್ಷದಿಂದ ಜೊಯಿಡಾದಲ್ಲಿದೀವಿ. ನಮ್ಮೆಜಮಾನ್ರೂ ಇಲ್ಲೇ ತೀರ್ಕೊಂಡ್ರು’ ಎಂದು ಅವರು ಸ್ಮರಿಸಿದರು.

‘ಅಣ್ಣಾವ್ರ ಮಗ ನಮ್ಮೂರಿಗೆ ಬಂದಿರೋದು ಗೊತ್ತಾಯ್ತು. ಹ್ಯಾಗದ್ರೂ ಮಾಡಿ ಅವ್ರನ್ನ ಭೆಟ್ಟಿಯಾಗ್ಲೇ ಬೇಕು, ನನ್ನ ಗಂಡ ನಿಮ್ಮ ಅಪ್ಪಾಜಿ ಪಿಚ್ಚರ್ ನೋಡ್ತನೇ ತೀರ್ಕೊಂಡ್ರು ಅಂತ ಹೇಳ್ಬೇಕಿತ್ತು. ಹಾಗೆ ಐ.ಬಿ. ಹೋಗಿದ್ದೆ. ಆದ್ರೆ, ಪೊಲೀಸ್ರು ಬಿಡ್ಲಿಲ್ಲ. ಕೊನೆಗೆ ನಾ ಜಗಳಕ್ಕೇ ನಿಂತೆ’ ಎಂದು ಮುಗುಳ್ನಕ್ಕರು.

‘ನನ್ ಗಲಾಟಿ ನೋಡಿ ಒಬ್ರು ಪೊಲೀಸು, ನನ್ನ ಫೋನ್ ನಂಬರ್ ತಂಗಡು, ಸಂಜೆ ಪುನೀತ್ ಬಂದ ಮ್ಯಾಗೆ ಹೇಳ್ತೀನಿ ಅಂದ್ರು. ರಾತ್ರಿ ಎಂಟರ ಸುಮಾರಿಗೆ ಅಪ್ಪು ಐ.ಬಿ.ಗೆ ಬಂದಾಗ ಪೊಲೀಸು ಈ ವಿಚಾರ ತಿಳಿಸಿದ್ರಂತೆ. ಅಜ್ಜೀನ ಬರೋದಕ್ಕೆ ಹೇಳಿ ಅಂತ ಪುನೀತ್ ಹೇಳಿ ಕರೆಸ್ಕೊಂಡ್ರು’ ಎಂದು ಅವರು ವಿವರಿಸಿದರು.

‘ಐ.ಬಿ.ಯಲ್ಲಿ ಮೇಲಿಂದ ಕೆಳಗೆ ಬಂದ ಪುನೀತ್, ನನ್ನ ಕೈ ಹಿಡ್ಕಂಡ್ರು. ಅವ್ರಿಗೆ ಎಲ್ಲ ವಿಚಾರ ಹೇಳ್ದೆ. ಬಹಳ ಬೇಸರ ಮಾಡ್ಕಂಡ್ರು. ಜೊತೆಗೇ ಬೆಂಗ್ಳೂರಿಗೆ ಬನ್ನಿ ಅಜ್ಜಿ, ಇಡೀ ಸಿಟಿ ಸುತ್ತಾಡಿಸ್ತೀನಿ ಅಂತಂದ್ರು’ ಎಂದು ಸಂತಸ ವ್ಯಕ್ತಪಡಿಸಿದರು.

ಸರಳತೆ ಮೆರೆದ ಪುನೀತ್:ಜೊಯಿಡಾ, ಡಿಗ್ಗಿ, ದಾಂಡೇಲಿಯ ಸುತ್ತಮುತ್ತ ಚಿತ್ರೀಕರಣದಲ್ಲಿ ಭಾಗಿಯಾದ ಪುನೀತ್ ರಾಜಕುಮಾರ್, ಕುಗ್ರಾಮಗಳ ಜನರೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತರು. ಗ್ರಾಮಸ್ಥರೊಂದಿಗೆ ನೆಲದಲ್ಲೇ ಕುಳಿತು, ಬಾಳೆ ಎಲೆಯಲ್ಲಿ ಊಟ ಸವಿದರು. ಸ್ಥಳೀಯ ದೇವರ ಗುಡಿಗಳಿಗೆ ಭೇಟಿ ನೀಡಿದರು. ಊರಿನ ಯುವಕರು, ಮಕ್ಕಳ ಅಭಿಮಾನಕ್ಕೆ ಮಣಿದು ಫೋಟೊ ತೆಗೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT