ಶಿರಸಿ: ಸಿದ್ದಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಅಲ್ಲಿನ ಗ್ರಾಮೀಣ ಭಾಗದ ನಿವಾಸಿಗಳು ಮಂಗಳವಾರ ಅಬಕಾರಿ ಉಪ ಅಧೀಕ್ಷಕ ಮಹೇಂದ್ರ ನಾಯ್ಕ ಅವರಿಗೆ ಮನವಿ ಮಾಡಿದರು.
‘ಗ್ರಾಮೀಣ ಭಾಗದ ಕೆಲವು ಗೂಡಂಗಡಿ, ಹೋಟೆಲ್ಗಳು, ಮನೆಗಳಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಕಾರ್ಮಿಕರು, ಯುವಕರು ಮದ್ಯ ಸೇವನೆ ವ್ಯಸನಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚುತ್ತಿದೆ’ ಎಂದು ಸಮಸ್ಯೆ ವಿವರಿಸಿದರು.
‘ಮದ್ಯ ಮಾರಾಟ ಅಕ್ರಮವಾಗಿ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ. ದೂರು ನೀಡಿದರೂ ದಾಳಿಗಳನ್ನು ನಡೆಸುತ್ತಿಲ್ಲ. ಇದು ಮದ್ಯ ಮಾರಾಟಗಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತಿದೆ’ ಎಂದು ಆರೋಪಿಸಿದರು.
‘ಮದ್ಯ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕದೆ ಇಲಾಖೆ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.