ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಗಳ ಮಗುವನ್ನು ನೋಡಲು ಬಂದ ಮಹಿಳೆಗೆ ಯುವಕನೊಬ್ಬ ಬುಧವಾರ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಕದ್ರಾ ನಿವಾಸಿ ಮಹಮ್ಮದಬೀ ಎಂಬ ಮಹಿಳೆ ಚಾಕು ಇರಿತಕ್ಕೆ ಒಳಗಾದವರು. ಆರೋಪಿ, ದಾಂಡೇಲಿಯ ರಮಜಾನ್ (25) ಮತ್ತು ಮಹಮ್ಮದಬೀ ಅವರ ಮಗಳು ಒಂದು ವರ್ಷದಿಂದ ಜೊತೆಯಾಗಿ ವಾಸವಿದ್ದರು. ಒಂದೆರಡು ದಿನಗಳ ಹಿಂದೆ ಮಗಳಿಗೆ ಹೆರಿಗೆಯಾಗಿದ್ದು, ಹಸುಗೂಸಿಗೆ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗಳನ್ನು ಮದುವೆಯಾಗು ಎಂದು ಮಹಿಳೆ ಹೇಳಿದ್ದಕ್ಕೆ ಕೋಪಗೊಂಡ ರಮಜಾನ್, ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ. ಅಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರವಾರ ನಗರಠಾಣೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಮಣ್ಣು ಕುಸಿದು ಕಾರ್ಮಿಕ ಸಾವು
ಕಾರವಾರ: ನೌಕಾನೆಲೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಯದ ಭಾಗವಾಗಿ ಮಂಗಳವಾರ ಸಂಜೆ ಪೈಪ್ಲೈನ್ ಅಳವಡಿಸುತ್ತಿದ್ದಾಗ ಮಣ್ಣು ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಬಿಹಾರದ ಸಿವಾನ್ ನಿವಾಸಿ ಪಪ್ಪು ಕುಮಾರ್ ಯಾದವ್ (22) ಮೃತರು. ಅವರು ಎನ್.ಸಿ.ಸಿ. ಕಂಪನಿಯಲ್ಲಿ ಪ್ಲಂಬರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುರಕ್ಷತಾ ಸಲಕರಣೆಗಳನ್ನು ಧರಿಸಿದ್ದ ಅವರು, ಸುಮಾರು 10 ಅಡಿ ಆಳದಲ್ಲಿ ಸಿಮೆಂಟ್ ಪೈಪ್ ಜೋಡಿಸುತ್ತಿದ್ದರು. ಆಗ ಮೇಲಿನಿಂದ ಮಣ್ಣು ಕುಸಿದು ಸೊಂಟ, ಬೆನ್ನು, ಹೊಟ್ಟೆಗೆ ಗಂಭೀರವಾದ ಏಟುಗಳಾದವು.
ಕೂಡಲೇ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಅಕ್ರಮ ಸಾಗಣೆ: ಜಪ್ತಿ
ಕಾರವಾರ: ತಾಲ್ಲೂಕಿನ ಕದ್ರಾ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾ ತಯಾರಿಕೆಯ ಮದ್ಯ ಹಾಗೂ ಬಿಯರ್ ಅನ್ನು ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ.
ಆರೋಪಿ ಮಾಜಾಳಿಯ ಸತೀಶ ಚಂದ್ರಕಾಂತ ಸಾರಂಗ (27) ಪರಾರಿಯಾಗಿದ್ದಾರೆ. ದಾಳಿ ಮಾಡಿದ ಸಂದರ್ಭದಲ್ಲಿ 96 ಟಿನ್ ಮದ್ಯ ಹಾಗೂ 116 ಟಿನ್ ಬಿಯರ್ ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.