ಕಾರವಾರ: ತಾಲ್ಲೂಕಿನ ಅರ್ಗಾದ ನೌಕಾನೆಲೆ ಪ್ರದೇಶದಿಂದ ಬಿಡಾಡಿ ಗೋವುಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಆರೋಪದಡಿ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಸಂಜೆ ಐವರನ್ನು ಬಂಧಿಸಿದ್ದಾರೆ.
ನೌಕಾನೆಲೆ ವ್ಯಾಪ್ತಿಯಿಂದ ಹೊರಬಂದ ಭಾರಿ ಗಾತ್ರದ ವಾಹನವನ್ನು ಚೆಂಡಿಯಾ ಗ್ರಾಮದ ಕೆಲ ಯುವಕರು, ಅಂಕೋಲಾದ ಗೋ ಪ್ರೇಮಿಗಳ ಸಂಘದ ಸದಸ್ಯರು ತಡೆಹಿಡಿದು ತಪಾಸಣೆಗೆ ಒಳಪಡಿಸಿದ್ದರು. ಗೋವುಗಳನ್ನು ವಾಹನದಲ್ಲಿ ಸಾಗಿಸುತ್ತಿರುವುದು ಇದೇ ವೇಳೆ ಬೆಳಕಿಗೆ ಬಂದಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಲಾರಿ ಚಾಲಕ, ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದರು.
‘ಗೋವುಗಳನ್ನು ನೌಕಾನೆಲೆ ಪ್ರದೇಶದಿಂದ ತರಲಾಗಿತ್ತು. ಹಲವು ದಿನಗಳಿಂದಲೂ ಇಂತಹ ಕೃತ್ಯ ನಡೆಯುತ್ತಿದೆ. ಈ ಬಾರಿ ಗೋವುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ವಾಹನ ತಡೆದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಚೆಂಡಿಯಾ ಗ್ರಾಮದ ಯುವಕರು ತಿಳಿಸಿದ್ದಾರೆ.
‘ಗೋವು ಸಾಗಾಟಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದಿದ್ದೇವೆ. ಗೋವುಗಳನ್ನು ಕಲಬುರ್ಗಿಗೆ ಸಾಗಿಸುತ್ತಿರುವ ಮಾಹಿತಿ ವಿಚಾರಣೆ ವೇಳೆ ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಬಳಿಕ ಆರೋಪಿಗಳ ಹೆಸರು ಬಹಿರಂಗಪಡಿಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನೌಕಾನೆಲೆ ವ್ಯಾಪ್ತಿಯಿಂದ ಅಕ್ರಮವಾಗಿ ಗೋವು ಸಾಗಾಟ ಪ್ರಕರಣವಾಗುತ್ತಿರುವುದು ಗಂಭೀರ ಅಪರಾಧ. ಈ ವಿಚಾರದ ಬಗ್ಗೆ ನೌಕಾದಳದ ಅಧಿಕಾರಿಗಳು ಸ್ಪಷ್ಟಪಡಿಸಬೇಕು’ ಎಂದು ಶಾಸಕ ಸತೀಶ ಸೈಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.