ಭಟ್ಕಳ: ಮುರುಡೇಶ್ವರಕ್ಕೆ ಭಾನುವಾರ ಆಗಮಿಸಿದ ಬೆಂಗಳೂರು-ಮೈಸೂರು-ಮುರುಡೇಶ್ವರ ರೈಲಿಗೆ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿ, ಪೂಜೆ ಸಲ್ಲಿಸಿದರು.
ಇಷ್ಟು ದಿನ ಮಂಗಳೂರು ವರೆಗಿದ್ದ ಈ ರೈಲನ್ನು ಜಿಲ್ಲೆಯ ಜನರ ಅನುಕೂಲಕ್ಕಾಗಿ ಭಾನುವಾರದಿಂದ ಮುರುಡೇಶ್ವರದ ವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಿಂದ ರಾತ್ರಿ 8.15ಕ್ಕೆ ಹೊರಡುವ ಈ ರೈಲು ಮಾರನೇ ದಿನ ಮಧ್ಯಾಹ್ನ 1.35 ಗಂಟೆಗೆ ಮುರುಡೇಶ್ವರ ತಲುಪಲಿದೆ. ಅದೇ ರೀತಿ ಮುರುಡೇಶ್ವರದಿಂದ ಮಧ್ಯಾಹ್ನ 2.22 ಗಂಟೆಗೆ ಹೊರಟು ಮಾರನೇ ದಿನ ಬೆಳಿಗ್ಗೆ 7.15 ಗಂಟೆಗೆ ಬೆಂಗಳೂರು ತಲುಪಲಿದೆ.
ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಪ್ರಖ್ಯಾತ ಪ್ರವಾಸಿ ತಾಣ ಮುರುಡೇಶ್ವರಕ್ಕೆ ವಿಸ್ತರಿಸಿರುವುದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗಿದೆ. ಭಾನುವಾರ ಮಧ್ಯಾಹ್ನ ಮುರುಡೇಶ್ವರಕ್ಕೆ ಆಗಮಿಸಿದ ಈ ರೈಲನ್ನು ಸ್ವಾಗತಿಸುವ ಸಂದರ್ಭದಲ್ಲಿ ಮುರುಡೇಶ್ವರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಸ್. ಎಸ್. ಕಾಮತ್, ಕುಂದಾಪುರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣೇಶ ಪುತ್ರನ್, ವಿವೇಕ ನಾಯ್ಕ, ಗೌತಮ್, ಉತ್ತರ ಕನ್ನಡ ರೈಲ್ಬೆ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗಾಂವಕರ್, ಜಾರ್ಜ ಪರ್ನಾಂಡಿಸ್, ಶಂಕರ ದೇವಾಡಿಗ, ಮುರುಡೇಶ್ವರ ಲಯನ್ಸ ಕ್ಲಬ್ ಮಾಜಿ ಅಧ್ಯಕ್ಷ ಎಂ ವಿ ಹೆಗಡೆ, ಯೋಗೇಶ ಭಟ್ಟ, ಗಜಾನನ ನಾಯ್ಕ, ಮಂಜುನಾಥ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.