ಶಿರಸಿಯಲ್ಲಿ ಸಹಕಾರ ಭವನ ಸ್ಥಾಪನೆ

ಶಿರಸಿ: ‘ಸಹಕಾರ ಕ್ಷೇತ್ರದತ್ತ ಯುವ ಜನತೆಯನ್ನು ಸೆಳೆಯುವ ಜತೆಗೆ ಈ ಕ್ಷೇತ್ರದ ಕುರಿತು ಸೂಕ್ತ ತರಬೇತಿ ನೀಡುವ ಉದ್ದೇಶದೊಂದಿಗೆ ಸಹಕಾರ ಭವನವನ್ನು ಶಿರಸಿಯಲ್ಲಿ ಶೀಘ್ರ ಸ್ಥಾಪಿಸಲಾಗುವುದು’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಭಾನುವಾರ ಕೆಡಿಸಿಸಿ ಬ್ಯಾಂಕ್ನ ಶತಮಾನೋತ್ಸವದ ಸಂಭ್ರಮಾಚರಣೆ ನೆನಪಿಗೆ ಹೊರತರಲಾದ ‘ಶತಮಾನದ ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಸಹಕಾರ ಸಂಘಗಳು ಸ್ವಾಯತ್ತವಾಗಿದ್ದರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ರೈತರಿಗೂ ಅನುಕೂಲವಾಗಲಿದೆ. ಸಹಕಾರ ಕ್ಷೇತ್ರ ಬಲಾಢ್ಯವಾಗಿರುವ ಕಡೆಗಳಲ್ಲಿ ರೈತರು ಉತ್ತಮ ಸ್ಥಿತಿಯಲ್ಲಿದ್ದಾರೆ. ಉತ್ತರ ಕನ್ನಡದಲ್ಲಿ ಈ ಕ್ಷೇತ್ರ ಬಲವಾಗಿ ಬೇರೂರಿದೆ’ ಎಂದರು.
ಸಹಕಾರ ಕ್ಷೇತ್ರದ ಪ್ರಮುಖ ಜಿ.ಟಿ.ಹೆಗಡೆ ತಟ್ಟೀಸರ, ‘ಸಾಮಾನ್ಯ ಜನರಿಗೂ ಸಹಕಾರ ಕ್ಷೇತ್ರದ ಬಗ್ಗೆ ಜ್ಞಾನ ಮೂಡಬೇಕು. ಶಾಲಾ ಪಠ್ಯಗಳಲ್ಲಿಯೂ ಸಹಕಾರ ತತ್ವಗಳ ಬಗ್ಗೆ ಪಾಠ ಬರಬೇಕು’ ಎಂದರು.
ಸ್ಮರಣ ಸಂಚಿಕೆಯ ಸಂಪಾದಕ ಎಸ್.ಪಿ.ಶೆಟ್ಟಿ, ‘ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಆರ್ಥಿಕ ಸಂಕಷ್ಟದ ಸ್ಥಿತಿ ತಲುಪಿದ್ದಾಗ ಡಿಸಿಸಿ ಬ್ಯಾಂಕ್ ನೆರವಿಗೆ ನಿಂತಿದೆ. ಡಿಸಿಸಿ ಬ್ಯಾಂಕ್ಗೆ ಪ್ರಾಮುಖ್ಯತೆ ನೀಡದೆ ಸಹಕಾರ ಸಂಘಗಳು ಪರ್ಯಾಯ ಮಾರ್ಗದಲ್ಲಿ ನಡೆಯುವುದು ಸೂಕ್ತವಲ್ಲ’ ಎಂದರು.
ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಜಿ.ಆರ್.ಹೆಗಡೆ ಸೋಂದಾ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಆರ್.ಎಂ.ಹೆಗಡೆ ಬಾಳೇಸರ, ರಾಮಕೃಷ್ಣ ಹೆಗಡೆ ಕಡವೆ, ಎಲ್.ಟಿ.ಪಾಟೀಲ, ಪ್ರಮೋದ ಢವಳೆ, ಕೃಷ್ಣ ದೇಸಾಯಿ, ರಾಘವೇಂದ್ರ ಶಾಸ್ತ್ರಿ, ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.