ಕುಮಟಾ: ಶಿರಸಿಯ ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್ನಿಂದ ಭಾನುವಾರ ಕುಮಟಾ ಹಾಗೂ ಹೊನ್ನಾವರ ತಾಲ್ಲೂಕು ಪ್ಯಾಸೆಂಜರ್ ಹಾಗೂ ಗೂಡ್ಸ್ ರಿಕ್ಷಾ ಚಾಲಕರಿಗೆ ಉಚಿತ ಸಮವಸ್ತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ, ‘ನಿತ್ಯ ದುಡಿಮೆ ಮಾಡಿ ಜೀವನ ನಿಭಾಯಿಸುವ ರಿಕ್ಷಾ ಚಾಲಕರನ್ನು ಗುರುತಿಸಿ ಗೌರವಿಸಿ ನೆರವು ನೀಡುತ್ತಿರುವ ಶಿರಸಿಯ ಅನಂತಮೂರ್ತಿ ಹೆಗಡೆ ಟ್ರಸ್ಟ್ ಕಾರ್ಯ ಮಾದರಿ’ ಎಂದರು.
ಟ್ರಸ್ಟ್ ಮುಖ್ಯಸ್ಥ ಅನಂತಮೂರ್ತಿ ಹೆಗಡೆ, ‘ದುಡಿಮೆಯ ಒಂದು ಭಾಗವನ್ನು ಸಮಾಜದಲ್ಲಿ ಶ್ರಮ ಜೀವನ ನಡೆಸುವವರನ್ನು ಗುರುತಿಸಿ ಕೈಲಾದ ನೆರವು ನೀಡುತ್ತಿದ್ದೇನೆ. ಸಮಾಜದಲ್ಲಿ ಎಲ್ಲ ವರ್ಗದವರೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದರೆ ಒಬ್ಬರಿಂದ ಇನ್ನೊಬ್ಬರಿಗೆ ಸಹಜವಾಗಿ ನೆರವು ಸಿಗುತ್ತದೆ’ ಎಂದರು.
ಮುಖ್ಯ ಅತಿಥಿಯಾಗಿದ್ದ ಕುಮಟಾ ಹಾಗೂ ಹೊನ್ನಾವರ ತಾಲ್ಲೂಕು ಆಟೊ ರಿಕ್ಷಾ ಸಂಘದ ಅಧ್ಯಕ್ಷರಾದ ಆರ್.ಜಿ.ನಾಯ್ಕ, ಶಿವರಾಜ ಮೇಸ್ತ ಮಾತನಾಡಿದರು.