ಶಿರಸಿ: ಇಲ್ಲಿನ ಕಸ್ತೂರಬಾನಗರದಲ್ಲಿ ಆಕಸ್ಮಿಕ ಅಗ್ನಿ ಅವಘಡಕ್ಕೆ ಮನೆ ಹೊತ್ತಿ ಉರಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಇಲ್ಲಿನ ಸನಾವುಲ್ಲಾ ಖಾನ್ ಅವರು ನಿರ್ಮಿಸಿದ್ದ ನೂತನ ಮನೆ ಬೆಂಕಿಗೆ ಆಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬಿದ್ದಿದೆ ಎನ್ನಲಾದ ಬೆಂಕಿಗೆ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಿಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರೂ ಹೆಚ್ಚಿನ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಜೀವಾಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಮನೆಯೊಳಗಿದ್ದ ಟಿವಿ, ಫ್ರಿಡ್ಜ್, ಕಬ್ಬಿಣದ ಕಪಾಟುಗಳು, ಪಾತ್ರೆಗಳು ಸೇರಿದಂತೆ ಬಟ್ಟೆಬರೆಗಳು ಸುಟ್ಟು ಕರಕಲಾಗಿವೆ. ಪ್ರಕರಣದಲ್ಲಿ ಪ್ರಾಥಮಿಕ ವರದಿ ಪ್ರಕಾರ ₹15ರಿಂದ ₹20 ಲಕ್ಷ ಹಾನಿ ಅಂದಾಜಿಸಲಾಗಿದೆ. ಸ್ಥಳಕ್ಕೆ ಮಾರುಕಟ್ಟೆ ಠಾಣೆ ಪಿಎಸ್ಐ ರತ್ನಾ ಕುರಿ ಭೇಟಿ ನೀಡಿ ಪರಿಶೀಲಿಸಿದರು. ಕಂದಾಯ ಸಿಬ್ಬಂದಿ ಹಾಜರಾಗಿ ಮಾಹಿತಿ ಪಡೆದರು.