ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಬಹಿಷ್ಕಾರದ ಆರೋಪ: ದೋಣಿಯಲ್ಲೆ ಉಳಿದ ಮೀನು!

Published 11 ಜನವರಿ 2024, 15:30 IST
Last Updated 11 ಜನವರಿ 2024, 15:30 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ‘ಕಾಮಧೇನು’ ಹೆಸರಿನ ಮೀನುಗಾರಿಕೆ ದೋಣಿಯಲ್ಲಿ ಲಕ್ಷಾಂತರ ಮೌಲ್ಯದ ಮೀನು ಮೂರು ದಿನಗಳಿಂದ ಉಳಿದುಕೊಂಡಿದೆ. ಸ್ಥಳೀಯ ಕೆಲ ಮುಖಂಡರ ಬೆದರಿಕೆಯಿಂದಾಗಿ ಮೀನು ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ ಎಂದು ದೋಣಿಯ ಮಾಲೀಕ ವಿಕ್ರಮ್ ತಾಂಡೇಲ್ ಆರೋಪಿಸಿದ್ದಾರೆ.

‘ಮೀನುಗಾರಿಕೆ ಮುಗಿಸಿ ಬಂದರಿಗೆ ಜ.9ರ ಬೆಳಿಗ್ಗೆಯೇ ದೋಣಿ ಬಂದು ನಿಂತಿದೆ. ಸುಮಾರು ₹2.5 ಲಕ್ಷಕ್ಕೂ ಹೆಚ್ಚು ಮೊತ್ತದ ಮೀನು ದೋಣಿಯಲ್ಲಿದೆ. ಅವಗಳನ್ನು ಖರೀದಿಸಲು ಈವರೆಗೆ ವ್ಯಾಪಾರಿಗಳು ಬಂದಿಲ್ಲ. ಇದಕ್ಕೆ ಪರ್ಸಿನ್ ಬೋಟ್ ಯೂನಿಯನ್‍ನ ಒತ್ತಡ ಕಾರಣ’ ಎಂದು ವಿಕ್ರಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಿದ್ದಾರೆ.

‘ಯೂನಿಯನ್ ವತಿಯಿಂದ ಬಹಿಷ್ಕರಿಸಲಾಗಿದ್ದ ದೋಣಿಯ ಮಾಲೀಕರಿಗೆ ಬೆಂಬಲಿಸಿದ ಬಳಿಕ ನಮ್ಮ ದೋಣಿಯಿಂದ ಮೀನು ಖರೀದಿಸದಂತೆ ವ್ಯಾಪಾರಿಗಳಿಗೆ ಒತ್ತಡ ಹೇರಲಾಗುತ್ತಿದೆ. ಹಲವು ವರ್ಷಗಳಿಂದ ಮೀನುಗಾರಿಕೆ ವೃತ್ತಿ ನಡೆಸುತ್ತಿರುವ ನಮಗೆ ಆರ್ಥಿಕ ನಷ್ಟದ ಜತೆಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ’ ಎಂದು ದೂರಿದ್ದಾರೆ.

‘ಕಾಮಧೇನು ದೋಣಿಯಿಂದ ಬೆಳಕಿನ ಮೀನುಗಾರಿಕೆ ನಡೆಸುತ್ತಿರುವ ಆರೋಪಗಳಿವೆ. ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಯೂನಿಯನ್ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದು ಪರ್ಸಿನ್ ಬೋಟ್ ಯೂನಿಯನ್ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಮೀನುಗಾರರಿಗೆ ಸೌಲಭ್ಯ ಒದಗಿಸುವುದಷ್ಟೆ ನಮ್ಮ ಜವಾಬ್ದಾರಿ. ಮೀನು ವ್ಯಾಪಾರದ ವಿಷಯದಲ್ಲಿ ಇಲಾಖೆ ಮಧ್ಯಪ್ರವೇಶಿಸುವುದಿಲ್ಲ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪ್ರತೀಕ್ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT