ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನವಾಸಿ: ವರದೆಯ ತಟದಲ್ಲಿ ‘ಕದಂಬ’ ಕಲರವ

ಐತಿಹಾಸಿಕ ಕದಂಬೋತ್ಸವಕ್ಕೆ ಕ್ಷಣಗಣನೆ, ಪಂಪ ಪ್ರಶಸ್ತಿ ಪ್ರದಾನ ಇಂದು
Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬನವಾಸಿ(ಮಯೂರವರ್ಮ ವೇದಿಕೆ): ಕನ್ನಡ ಮಣ್ಣಿನ ಘಮವನ್ನು ನಾಡಿನೆಲ್ಲೆಡೆ ಪಸರಿಸುವ ರಾಜ್ಯ ಮಟ್ಟದ ಕದಂಬೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ವರದೆಯ ತಟದಲ್ಲಿ ಕಲೆಯ ನಾದ ರಿಂಗಿಣಿಸಲಿದೆ.

ಫೆ.8 ಮತ್ತು 9ರಂದು ನಡೆಯಲಿಯುವ ಐತಿಹಾಸಿಕ ಉತ್ಸವಕ್ಕೆ ಸಿದ್ಧತೆಗಳು ಅಂತಿಮಗೊಂಡಿವೆ. ಉತ್ಸವ ಆರಂಭದ 25ನೇ ವರ್ಷಾಚರಣೆಯ ಅದ್ಧೂರಿ ಸಮಾರಂಭಕ್ಕೆ ಮಯೂರವರ್ಮ ವೇದಿಕೆ ಸಜ್ಜುಗೊಂಡಿದೆ.

ಮಧುಕೇಶ್ವರ ದೇವಾಲಯದ ಎದುರು ಸೇರುವ ಜನಪದ ಕಲಾ ತಂಡಗಳು, ಶಾಲಾ ಮಕ್ಕಳು ಮಧ್ಯಾಹ್ನ 2.30ಕ್ಕೆ ಮೆರವಣಿಗೆಯಲ್ಲಿ ಸಾಗುವ ಮೂಲಕ ಹಬ್ಬದ ಸಡಗರ ಅನಾವರಣಗೊಳ್ಳುತ್ತದೆ. ವಾದ್ಯ ಮೇಳದೊಂದಿಗೆ ಹಾದಿ ಬೀದಿಗಳ ಜನರನ್ನು ಬಡಿದೆಬ್ಬಿಸುವ ಮೆರವಣಿಗೆ ಕದಂಬೋತ್ಸವ ಮೈದಾನದಲ್ಲಿ ಕೊನೆಗೊಳ್ಳುತ್ತದೆ.

ಗುಡ್ನಾಪುರದಿಂದ ಗುರುವಾರ ಮೆರವಣಿಗೆ ಹೊರಟಿರುವ ಕದಂಬ ಜ್ಯೋತಿ, ಶನಿವಾರ ಮಧ್ಯಾಹ್ನ ಕದಂಬೋತ್ಸವ ಮೈದಾನಕ್ಕೆ ಬಂದು ತಲುಪುತ್ತದೆ. ಇದೇ ಜ್ಯೋತಿಯಿಂದ ಕದಂಬೋತ್ಸವ ಕಾರ್ಯಕ್ರಮ ಉದ್ಘಾಟನೆಯಾಗುತ್ತದೆ. ಇದೇ ವೇದಿಕೆಯಲ್ಲಿ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಮಾಡುವರು.

‘ಕದಂಬೋತ್ಸವದ ವೈಚಾರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ದಿನ ನಡೆಯುತ್ತವೆಯಾದರೂ, ಅದಕ್ಕೆ ಪೂರ್ವಭಾವಿಯಾಗಿ ಗುಡ್ನಾಪುರದಲ್ಲಿ ಜ್ಯೋತಿ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಕದಂಬ ಕಪ್ ಕಬಡ್ಡಿ, ಸ್ಲೋ ಮೊಪೆಡ್, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆಗಳು ಪೂರ್ಣಗೊಂಡಿವೆ. ಸಾರ್ವಜನಿಕರು ಅತೀ ಉತ್ಸಾಹದಿಂದ ಇವುಗಳಲ್ಲಿ ಭಾಗವಹಿಸಿದರು’ ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

‘ಉತ್ಸವದ ಮೆರುಗನ್ನು ಹೆಚ್ಚಿಸಲು ಕೃಷಿ ಮೇಳ, ಫಲಪುಷ್ಪ ಮೇಳ, ಶ್ವಾನ ಮತ್ತು ಜಾನುವಾರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 50ಕ್ಕೂ ಹೆಚ್ಚು ತಂಡಗಳು ಕಲಾ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸಭಾ ವೇದಿಕೆಯ ಮುಂಭಾಗದಲ್ಲಿ 500ರಷ್ಟು ವಿಐಪಿ ಆಸನಗಳು, 8000ದಷ್ಟು ಕುರ್ಚಿಗಳನ್ನು ಹಾಕಲಾಗಿದೆ. ವೇದಿಕೆಯ ಬಲಭಾಗದಲ್ಲಿ 75ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT