ಕಾರವಾರ: ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಅತ್ಯುತ್ತಮ ಸ್ವಾಯತ್ತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ದೇಶದಲ್ಲೇ 10ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಲ್ಪನಾ ಕೆರವಡಿಕರ್, ಉತ್ತಮ ಆಡಳಿತ ನಿರ್ವಹಣೆಗೆರಾಷ್ಟ್ರಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ಗೆ ಭಾಜನರಾಗಿದ್ದಾರೆ.
ದೆಹಲಿಯ ಎಜುಕೇಷನ್ ವರ್ಲ್ಡ್ ಮತ್ತು ಸಿ–ಫೋರ್ ಸಂಸ್ಥೆಗಳು ನಡೆಸಿದ ಈ ಸಮೀಕ್ಷೆಯಲ್ಲಿ ದೇಶದ 500 ಕಾಲೇಜುಗಳ ಮಾಹಿತಿ ಸಂಗ್ರಹಿಸಲಾಗಿತ್ತು. ಇದರಲ್ಲಿ ಸರ್ಕಾರಿ ಸ್ವಾಯತ್ತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ರಾಜ್ಯದ ಎರಡೇ ಕಾಲೇಜುಗಳು ಸ್ಥಾನ ಪಡೆದಿವೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಪಟ್ಟಿಯಲ್ಲಿದ್ದು, 700ರಲ್ಲಿ 510 ಅಂಕಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ. ಕಾರವಾರದ ಕಾಲೇಜಿಗೆ480 ಅಂಕಗಳು ಲಭಿಸಿವೆ. 539 ಅಂಕಗಳನ್ನು ಪಡೆದಿರುವ ಕೇರಳದ ಎರ್ನಾಕುಲಂ ಮಹಾರಾಜ ಕಾಲೇಜು ಪ್ರಥಮ ಸ್ಥಾನ ಪಡೆದಿದೆ.ಖಾಸಗಿ, ಸರ್ಕಾರಿ, ಸ್ವಾಯತ್ತ ಮತ್ತು ಸ್ವಾಯತ್ತವಲ್ಲದ ಕಾಲೇಜುಗಳೆಂಬ ವಿಭಾಗದಲ್ಲಿ ಪ್ರತ್ಯೇಕವಾಗಿ ಸಮೀಕ್ಷೆ ಕೈಗೊಳ್ಳಲಾಗಿತ್ತು.
2016–17ನೇ ಸಾಲಿನಲ್ಲಿ ಸ್ವಾಯತ್ತತೆ ಪಡೆದುಕೊಂಡಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ನಾಲ್ಕೇ ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಈ ಕಾಲೇಜಿನಲ್ಲಿ ಪ್ರಸ್ತುತ ಎಲ್ಲ ವಿಭಾಗಗಳಲ್ಲಿ ಒಟ್ಟು 1,407 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಸಮೀಕ್ಷೆಗೆ ಏನು ಪರಿಗಣನೆ?:ಶಿಕ್ಷಣ ಸಂಸ್ಥೆಯಸ್ಥಿತಿಗತಿ, ಸಿಬ್ಬಂದಿಯ ಕಾರ್ಯಕ್ಷಮತೆ, ಪಠ್ಯಕ್ರಮ, ಬೋಧನೆ ಕ್ರಮ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಮಾಹಿತಿ,ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತ ಪ್ರಮಾಣ,ವಿದ್ಯಾರ್ಥಿಗಳು ಹಾಗೂ ನಾಗರಿಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು.
ಏಕೀಕೃತ ಕೋರ್ಸ್ಗೆ ಅನುಮತಿ:‘ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿಏಕೀಕೃತ(ಇಂಟಗ್ರೇಟೆಡ್) ಬಿ.ಎ– ಬಿ.ಇಡಿ ಮತ್ತು ಬಿ.ಎಸ್.ಸಿ– ಬಿ.ಇಡಿ ಕೋರ್ಸ್ ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಈ ವರ್ಷ ಜೂನ್ನಿಂದ ತರಗತಿಗಳು ಆರಂಭವಾಗಲಿವೆ’ ಎಂದು ಡಾ.ಕಲ್ಪನಾ ಕೆರವಡಿಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕೋರ್ಸ್ ಆರಂಭಿಸಲು ಪ್ರಸ್ತಾವವನ್ನು ಶನಿವಾರ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಒಟ್ಟು 34ಕಾಲೇಜುಗಳಿಗೆ ಅನುಮತಿ ನೀಡಲಾಗಿದ್ದು, ಉತ್ತರಕನ್ನಡದಲ್ಲಿ ನಮ್ಮ ಕಾಲೇಜು ಮಾತ್ರ ಆಯ್ಕೆಯಾಗಿದೆ’ ಎಂದರು.
‘ಕಾಲೇಜಿನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಕೊಠಡಿಗಳನ್ನು ಈ ತರಗತಿಗಳಿಗೆ ಬಳಸಿಕೊಳ್ಳಲಾಗುವುದು. ಉಪನ್ಯಾಸಕರಬಗ್ಗೆಇಲಾಖೆಯಿಂದ ಮಾಹಿತಿ ಬರಲಿದೆ’ ಎಂದರು.
ಏನು ಪ್ರಯೋಜನ?: ‘ದ್ವಿತೀಯ ಪಿ.ಯು ಆದ ಬಳಿಕಕಲಾ ಅಥವಾ ವಿಜ್ಞಾನ ವಿಭಾಗದ ಪದವಿಯೊಂದಿಗೆ ಏಕೀಕೃತವಾಗಿನಾಲ್ಕು ವರ್ಷಗಳ ಕೋರ್ಸ್ ಮಾಡಲು ಅವಕಾಶವಿದೆ. ವಿದ್ಯಾರ್ಥಿಗಳಿಗೆಬಿ.ಎ ಅಥವಾ ಬಿ.ಎಸ್.ಸಿ – ಬಿ.ಇಡಿ ಎಂದೇ ಪ್ರಮಾಣಪತ್ರ ನೀಡಲಾಗುತ್ತದೆ. ಇದರಿಂದನಾಲ್ಕೇವರ್ಷಗಳಲ್ಲಿ ಎರಡುಪದವಿಗಳನ್ನು ಅಧ್ಯಯನ ಮಾಡಲು ಅವಕಾಶವಾಗುತ್ತದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.