ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕರ್ಣ: ಮುಗಿಲು ಮುಟ್ಟಿದ ಹರ ಹರ ಮಹಾದೇವ ಘೋಷಣೆ

Published 11 ಮಾರ್ಚ್ 2024, 11:27 IST
Last Updated 11 ಮಾರ್ಚ್ 2024, 11:27 IST
ಅಕ್ಷರ ಗಾತ್ರ

ಗೋಕರ್ಣ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಸೋಮವಾರ, ಮಹಾಬಲೇಶ್ವರನ ಬ್ರಹ್ಮರಥೋತ್ಸವ ಶಿವನ ಸ್ತುತಿ, ಸಡಗರ, ಹರ ಹರ ಮಹಾದೇವ ಘೋಷಣೆಯೊಂದಿಗೆ ನಡೆಯಿತು.

ರಥಬೀದಿಯಲ್ಲಿ ನಡೆದ ಈ ಆಕರ್ಷಕ ರಥೋತ್ಸವ ಮುಖ್ಯ ದೇವರಾದ ಮಹಾಬಲೇಶ್ವರನ ಮೂರ್ತಿಯನ್ನು ಹೊತ್ತು ವೆಂಕಟ್ರಮಣ ದೇವಸ್ಥಾನದವರೆಗೆ ಸಾಗಿ ತಿರುಗಿ ಮೂಲಸ್ಥಾನಕ್ಕೆ ಬಂದು ನಿಂತಿತು. ಅತಿ ಎತ್ತರದ ರಥ ಎಂದೇ ಪ್ರಸಿದ್ಧಿ ಪಡೆದ, ಅತಿ ಪುರಾತನವಾದ ಈ ರಥವನ್ನು ಬಣ್ಣ-ಬಣ್ಣದ ಬಾವುಟಗಳಿಂದ, ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು. ರಥವನ್ನು ಆಕರ್ಷಕವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಸ್ಥಳೀಯರ ಜತೆಗೆ ಅನೇಕ ವಿದೇಶಿಯರೂ ರಥೋತ್ಸವದಲ್ಲಿ ಪಾಲ್ಗೊಂಡು ಸಂತೋಷಪಟ್ಟರು.

ಸಹಸ್ರಾರು ಜನ ಸುತ್ತಮುತ್ತಲು ನಿಂತು ರಥೋತ್ಸವವನ್ನು ನೋಡಿ ಆನಂದಿಸಿದರು. ರಥೋತ್ಸವದ ಉದ್ದಕ್ಕೂ ಹರ ಹರ ಮಹಾದೇವ, ಜಯ ಜಯ ಶಂಕರ, ಹರ ಹರ ಶಂಕರ ಎಂಬ ಶಿವ ಸ್ತುತಿಗಳು ಭಕ್ತರ ಬಾಯಲ್ಲಿ ಕೇಳಿ ಬಂದಿತು.

ರಸ್ತೆಯ ಎರಡು ಪಕ್ಕದಲ್ಲಿಯ ಮನೆಯ ಮಹಡಿಗಳ ಮೇಲೆ ವಿದೇಶಿಗರು ಸೇರಿದಂತೆ ಭಕ್ತರು ನಿಂತು ಪೋಟೊ ಕ್ಲಿಕ್ಕಿಸುತ್ತಿದ್ದರು. ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಈ ರಥೋತ್ಸವಕ್ಕೆ ಸಾಕ್ಷಿಯಾದರು.

ಗೋಕರ್ಣ ಠಾಣಾ ನಿರೀಕ್ಷಕ ಯೋಗೀಶ ಕೆ. ಎಂ, ಸ್ಥಳದಲ್ಲಿ ಉಪಸ್ಥಿತರಿದ್ದರು. ಅವರ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಕಾರ್ಯದರ್ಶಿ, ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ, ಕವಳೆ ಮಠದ ಕೈವಲ್ಯ ಮಠಾಧೀಶ ಶಿವಾನಂದ ಸರಸ್ವತಿ ಸ್ವಾಮೀಜಿ ರಥಕಾಣಿಕೆ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT