ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಟಿ ಸ್ಪೆಷಾಲಿಟಿ ಮಾದರಿಯಲ್ಲಿ ‘ಪಂಡಿತ’ ಆಸ್ಪತ್ರೆ: ಶಾಸಕ ಭೀಮಣ್ಣ ನಾಯ್ಕ

Published 29 ನವೆಂಬರ್ 2023, 14:39 IST
Last Updated 29 ನವೆಂಬರ್ 2023, 14:39 IST
ಅಕ್ಷರ ಗಾತ್ರ

ಶಿರಸಿ: ‘ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾದರಿಯಲ್ಲಿ ಸಿದ್ಧಪಡಿಸಲಾಗುವುದು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಆಸ್ಪತ್ರೆ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಪೂರ್ವದಲ್ಲಿ ಇರುವ ಆಸ್ಪತ್ರೆ ಬಗ್ಗೆ ಗಮನ ಹರಿಸಬೇಕು. ಸಮಸ್ಯೆ ಇದ್ದರೆ ಸರಿ ಪಡಿಸಬೇಕು. ಶಿರಸಿ ಆಸ್ಪತ್ರೆ ಉತ್ತಮ ಕಾರ್ಯ ನಿರ್ವಹಣೆ ಮೂಲಕ ಜನರ ವಿಶ್ವಾಸ ಗಳಿಸಿದೆ. ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿರುವವರು ಸುಪರ್ ಸ್ಪೆಷಾಲಿಟಿ ಎಂದರೆ ಏನು, ಸೌಲಭ್ಯ ಏನಿರುತ್ತದೆ ಎಂಬುದನ್ನು ತಿಳಿದುಕೊಂಡು ಹೋರಾಟ ಮಾಡಲಿ’ ಎಂದರು. 

ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್ ಹೆಚ್ಚುವರಿ ಅಂಬ್ಯುಲೆನ್ಸ್ ಅಗತ್ಯತೆ ಬಗ್ಗೆ ಗಮನಸೆಳೆದಾಗ ಪ್ರತಿಕ್ರಿಯಿಸಿದ ಶಾಸಕರು, ‘ಈಗಾಗಲೇ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಅಂಬ್ಯುಲೆನ್ಸ್ ಮಂಜೂರು ಮಾಡಲಾಗಿದ್ದು, ತಾಂತ್ರಿಕ ಕಾರಣದಿಂದ ಇನ್ನೂ ಬಂದಿಲ್ಲ. ಇನ್ನೊಮ್ಮೆ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆದಾಗ್ಯೂ ಮಂಜೂರಾಗದಿದ್ದಲ್ಲಿ ನಾನೇ ಹೊಸ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಡಯಾಲಿಸಿಸ್ ಘಟಕದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ವೇತನ ಆಗದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬುಧವಾರ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಂಡಿತ ಸಾರ್ವಜನಿಕ ಆಸ್ಪತ್ರೆ ಡಯಾಲಿಸಿಸ್ ಸಿಬ್ಬಂದಿ ಕರೆಸಿ ಮಾತನಾಡಿದ ಭೀಮಣ್ಣ, ರೋಗಿಗಳನ್ನು ಕುಟುಂಬದವರಂತೆ ನೋಡಬೇಕು. ವೇತನ ಬರದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ನಮ್ಮ ವಿರೋಧವಿಲ್ಲ. ಆದರೆ, ಇಲ್ಲಿಯ ರೋಗಿಗಳಿಗೆ ತೊಂದರೆ ಆಗುವುದರಿಂದ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಯ ಮಾಡದಂತೆ ಸೂಚನೆ ನೀಡಿದರು. ಜತೆ, ವೇತನ ಆಗುವವರೆಗೂ ಆಸ್ಪತ್ರೆಯಿಂದಲೇ ಆರ್ಥಿಕ ಸಹಾಯ ಒದಗಿಸಲಾಗುವುದು. ವೇತನ ಆದ ಬಳಿಕ ಈ ಹಣವನ್ನು ಆಸ್ಪತ್ರೆಗೆ ವಾಪಸ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು.

ತಹಶೀಲ್ದಾರ್ ಶ್ರೀಧರ ಮುಂದಲಮನಿ, ಡಿವೈಎಸ್‌ಪಿ ಕೆ.ಎಲ್.ಗಣೇಶ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT