ಕಾರವಾರ: ಜಿಲ್ಲೆಯ ವಿವಿಧೆಡೆ ಗುರುವಾರ ನಸುಕಿನ ಜಾವ ಕೆಲವು ತಾಸುಗಳವರೆಗೆ ಮಳೆ ಸುರಿಯಿತು. ಇದರಿಂದ ಕೊಯ್ಲು ಮಾಡಿಟ್ಟಿದ್ದ ಭತ್ತ, ಒಣಗಿಸಲು ಇಡಲಾದ ಅಡಿಕೆ ನೆನೆಯುವಂತಾಯಿತು.
ಜಿಲ್ಲೆಯಾದ್ಯಂತ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ರಾತ್ರಿ ಸೆಖೆಯ ವಾತಾವರಣ ಉಂಟಾಗಿತ್ತು. ತಡರಾತ್ರಿಯ ಬಳಿಕ ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿತು. ಕಾರವಾರ, ಅಂಕೋಲಾ, ಕುಮಟಾ ಸೇರಿ ಹಲವೆಡೆ ಬೆಳಕು ಹರಿಯುವವರೆಗೂ ಮಳೆ ಬಿದ್ದಿತ್ತು. ರಸ್ತೆಯಲ್ಲಿ ಕೆಸರು ನೀರು ನಿಂತು ಸಮಸ್ಯೆ ಉಂಟಾಯಿತು.