ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ‘ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪೀಡಿತರಲ್ಲಿ ಬಹುಪಾಲು ಬೇರೆ ರಾಜ್ಯಗಳಿಂದ ಬಂದವರೇ ಆಗಿದ್ದಾರೆ.ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ನಿಂದ ಮರಳಿದವರಾಗಿದ್ದಾರೆ. ಅದೇ ರೀತಿ ದುಬೈನಿಂದ ಬಂದವರಲ್ಲೂ ಸೋಂಕು ಕಾಣಿಸಿಕೊಂಡಿದೆ. ನಾವು ಸುರಕ್ಷಿತವಾಗಿಯೇ ಇದ್ದೆವು. ಆದರೆ,ನಮ್ಮ ರಾಜ್ಯದ ಜನರನ್ನು ಪುನಃ ಬರಬೇಡಿ ಎಂದು ಹೇಳುವ ಅಧಿಕಾರ ನಮಗಿಲ್ಲ. ಗರಿಷ್ಠ ಮಟ್ಟದ ಎಚ್ಚರಿಕೆ ವಹಿಸಿ ಕರೆದುಕೊಂಡು ಬರಲಾಗುತ್ತಿದೆ. ಅವರನ್ನು ಯಾವ ಕಾರಣಕ್ಕೂ ದೂರುವ ಮತ್ತು ದೂರ ಮಾಡುವ ಪ್ರಶ್ನೆಯೇ ಇಲ್ಲ’ ಎಂದರು.