ಶಿರಸಿ: ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಹಳಿಯಾಳದಲ್ಲಿ ರೈತರು, ಧಾರ್ಮಿಕ ಮುಖಂಡರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬೆಂಬಲ ಘೋಷಿಸಿದ್ದಾರೆ.
‘ರೈತರು ನ್ಯಾಯ ಸಮ್ಮತವಾದ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಅವರ ಕೂಗಿಗೆ ತಕ್ಷಣ ಸ್ಪಂದಿಸಲಿ’ ಎಂದು ಸ್ವಾಮೀಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಗವದ್ಗೀತಾ ಅಭಿಯಾನದ ಅಂಗವಾಗಿ ದಾವಣಗೆರೆಯಲ್ಲಿರುವ ಕಾರಣ ಸ್ವಾಮೀಜಿ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಲು ಆಗಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.
ಮಠದ ಪರವಾಗಿ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ, ವನವಾಸಿ ಕಲ್ಯಾಣದ ದೊಂಡು ಪಾಟೀಲ್, ವೃಕ್ಷಲಕ್ಷ ಆಂದೋಲನ ಸಮಿತಿಯ ಟಿ.ಆರ್.ಹೆಗಡೆ, ಗಣಪತಿ ಕೆ. ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಉಪವಾಸದಿಂದ ಅಸ್ವಸ್ಥರಾದ ಪರಮಾತ್ಮ ಸ್ವಾಮೀಜಿ ಮತ್ತು ರೈತ ಕಾರ್ಯಕರ್ತರಿಗೆ ಉಪವಾಸ ಕೈ ಬಿಡಲು ಮನವಿ ಮಾಡಿದರು.