ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಅಪಘಾತದಲ್ಲಿ ಶಿಕ್ಷಕ ಸಾವು: ರಸ್ತೆ ತಡೆದು ಪ್ರತಿಭಟನೆ

Published 22 ಡಿಸೆಂಬರ್ 2023, 6:21 IST
Last Updated 22 ಡಿಸೆಂಬರ್ 2023, 6:21 IST
ಅಕ್ಷರ ಗಾತ್ರ

ಕಾರವಾರ: ನಗರದ ಹಬ್ಬುವಾಡಾದ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಬಡಿದು ಶಿಕ್ಷಕರೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಅವೈಜ್ಞಾನಿಕ ರಸ್ತೆ ಅಪಘಾತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟಿಸಿದರು.

ತಾಲ್ಲೂಕಿನ ಕಿನ್ನರ ಗ್ರಾಮದವರಾದ, ದೇವಳಮಕ್ಕಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉಮೇಶ ಗುನಗಿ (53) ಮೃತರಾದವರು.

'ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಹೋದರಿ ಆರೋಗ್ಯ ವಿಚಾರಿಸಿ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾದರು' ಎಂದು ಮೃತರ ಕುಟುಂಬ ಸದಸ್ಯರೊಬ್ಬರು ಹೇಳಿದರು.

'ಉಮೇಶ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದರು. ಹಿಂದಿನಿಂದ ಬಂದ ಟಿಪ್ಪರ್ ಅವರ ಮೈಮೇಲೆ ಹರಿಯಿತು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.

ರಸ್ತೆ ವಿಭಜಕ ನಿರ್ಮಿಸಿ:

ಅಪಘಾತಕ್ಕೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದು ಕಾರಣ. ವಿಭಜಕ ಅಳವಡಿಸುವ ಕಾರಣಕ್ಕೆ ಎರಡು ರಸ್ತೆಗಳ ಮಧ್ಯೆ ಹೊಂಡ ಹಾಗೆಯೆ ಬಿಡಲಾಗಿದೆ. ಇದರಿಂದ ವಾಹನ ಸವಾರರು ಆಯತಪ್ಪಿ ಬೀಳುವುದು ಹೆಚ್ಚುತ್ತಿದೆ. ರಸ್ತೆ ಅಂಚಿಗೆ ಚರಂಡಿಯೂ ಸರಿಯಾಗಿ ನಿರ್ಮಿಸಿಲ್ಲ. ಅವೆಲ್ಲವನ್ನು ತಕ್ಷಣಕ್ಕೆ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಶವ ತೆಗೆಯಲು ಬಂದ ಪೊಲೀಸರನ್ನು ತಡೆದ ಪ್ರತಿಭಟನಾಕಾರರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT