ಕಾರವಾರ: ‘ಮತದಾನ ಪ್ರತಿಯೊಬ್ಬರ ಹಕ್ಕು ಅದನ್ನು ಯಾರೂ ಕಳೆದುಕೊಳ್ಳಬಾರದು. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ಮತದಾರರ ಚೀಟಿಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು’ ಎಂದು ತಹಶೀಲ್ದಾರ್ ಎನ್.ಎಫ್.ನೊರೋನಾ ಹೇಳಿದರು.
ಇಲ್ಲಿನ ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ಒಂದಲ್ಲ, ನಾಲ್ಕು ಅವಕಾಶಗಳು’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಇಒ ಆನಂದಕುಮಾರ ಬಾಲಪ್ಪನವರ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಮಹತ್ವ ಇದೆ. ಹೀಗಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಯುವ ಜನತೆ ಆಸಕ್ತಿ ತೋರಬೇಕು’ ಎಂದರು.
ಮತಗಟ್ಟೆ ಅಧಿಕಾರಿ ಮಹಾದೇವ ರಾಣೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆಗಳನ್ನು ವಿವರಿಸಿದರು. ಪ್ರಾಚಾರ್ಯ ಕೇಶವ ಕೆ.ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಜೇಶ ಮರಾಠಿ ಕಾರ್ಯಕ್ರಮ ನಿರೂಪಿಸಿದರು. ಗ್ರಂಥ ಪಾಲಕ ಸುರೇಶ ಗುಡಿಮನಿ ವಂದಿಸಿದರು.
ಉಪ ತಹಶೀಲ್ದಾರ್ ದಾಮೋದರ ಹುಲಸ್ವಾರ, ಐಕ್ಯೂಎಸಿ ಸಂಚಾಲಕ ಸುಧೀರ ಕದಂ ಇದ್ದರು.