ಹೊಸಪೇಟೆ (ವಿಜಯನಗರ): ‘ಮಹಿಳೆಯರು ಹೊರಗೆ ಬರಬಾರದು ಅಂದರೆ ಏನರ್ಥ? ಮಹಿಳೆಯರ ಬಗ್ಗೆ ಗೃಹಸಚಿವರ ಲಘುವಾದ ಹೇಳಿಕೆ ಸರಿಯಲ್ಲ’ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
‘ಮೈಸೂರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ಗಂಭೀರ ಸ್ವರೂಪದ ಪ್ರಕರಣ. ಗೃಹಸಚಿವರೇ ಮನಬಂದಂತೆ ಹೇಳಿಕೆ ಕೊಟ್ಟರೆ ಕೃತ್ಯ ಎಸಗಿದವರಿಗೆ ಯಾವ ಸಂದೇಶ ಹೋಗುತ್ತದೆ ಎನ್ನುವುದನ್ನು ಅರಿಯಬೇಕು’ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಘಟನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಆಗ್ರಹಿಸಿದರು.
ನಾಚಿಕೆಗೇಡಿನ ವಿಚಾರ ‘ಗೃಹಸಚಿವರು ಮಹಿಳೆಯರ ಬಗ್ಗೆ ಕೊಟ್ಟಿರುವ ಹೇಳಿಕೆ ನಾಚಿಕೆಗೇಡಿನದು’ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
‘ಬಿಜೆಪಿಯವರು ದೇವರು, ದಿಂಡರು ಅಂತ ಹೇಳ್ತಾರೆ. ಯಾರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದು ಗೊತ್ತಿಲ್ಲ. ವ್ಯವಹಾರ ಮಾಡಿ ಪಕ್ಷ ಕಟ್ಟಿದರೆ ಹೀಗೆ ಆಗೋದು’ ಎಂದು ಪ್ರತಿಕ್ರಿಯಿಸಿದರು.