ಹೊಸಪೇಟೆ (ವಿಜಯನಗರ): ನಗರದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.
ಸೋಮವಾರ ಸಂಜೆ ನಾಲ್ಕು ಗಂಟೆಗೆ ಆರಂಭಗೊಂಡ ಮಳೆ ಸಂಜೆ ಆರು ಗಂಟೆಯ ವರೆಗೆ ಸುರಿಯಿತು. ಜೋರು ಮಳೆಗೆ ನಗರದ ಹಂಪಿ ರಸ್ತೆ, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ, ಅಮರಾವತಿ, ಬಳ್ಳಾರಿ ರಸ್ತೆ ಸೇರಿದಂತೆ ಹಲವೆಡೆ ರಸ್ತೆಯ ಮೇಲೆ ಅಪಾರ ನೀರು ಸಂಗ್ರಹವಾಗಿತ್ತು.
ಹಂಪಿ ರಸ್ತೆಯಲ್ಲಿ ಚರಂಡಿಗಳು ಉಕ್ಕಿ ಹರಿದು, ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿತ್ತು. ರಸ್ತೆ ಸರಿಯಾಗಿ ಕಾಣದಿದ್ದರಿಂದ ವಾಹನಗಳು ಬಹಳ ನಿಧಾನಗತಿಯಲ್ಲಿ ಸಂಚರಿಸಿದವು. ಪಾದಚಾರಿಗಳು ನಿಂತ ನೀರಿನಲ್ಲೇ ಹರಸಾಹಸ ಪಡುತ್ತ ಸಾಗಿದರು.
ಎರಡು ದಿನಗಳ ಹಿಂದೆ ಸುರಿದ ಮಳೆಗೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ನಗರಸಭೆ ಚರಂಡಿ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಪಟೇಲ್ ನಗರದಲ್ಲೂ ಚರಂಡಿಗಳು ಉಕ್ಕಿ ಹರಿದು, ಹೊಲಸು ರಸ್ತೆಯ ಮೇಲೆ ಹರಿದಾಡಿದ್ದರಿಂದ ಎಲ್ಲೆಡೆ ದುರ್ಗಂಧ ಹರಡಿತ್ತು.
ವಾರದಿಂದ ಸತತವಾಗಿ ಮಳೆ ಸುರಿಯುತ್ತಿದೆ. ದಿನವಿಡೀ ಬಿಸಿಲು ಇರುತ್ತಿದ್ದು, ಸಂಜೆಯಾದೊಡನೆ ಧೋ ಎಂದು ಮಳೆಯಾಗುತ್ತಿದೆ.