ಹೊಸಪೇಟೆ (ವಿಜಯನಗರ): ಲೋಕಸಭಾ ಚುನಾವಣೆ ಕೊನೆಗೊಂಡಿದ್ದು, ಬಳ್ಳಾರಿ ಕ್ಷೇತ್ರದಲ್ಲಿ ಗೆಲುವು ನಮ್ಮದೇ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹೇಳುತ್ತಿವೆ. ಅಧಿಕ ಮತದಾನ ಆಗಿ ರುವುದು ಯಾರಿಗೆ ಲಾಭ ಎಂಬುದರ ಬಗ್ಗೆ ಎರಡೂ ಪಕ್ಷಗಳು ಅಷ್ಟಾಗಿ ತಲೆಕೆಡಿಸಿಕೊಂಡಂತೆ ಇಲ್ಲ.
‘ಮತದಾನ ಅಧಿಕ ಆಗಬೇಕು ಎಂದು ಎಲ್ಲಾ ಪಕ್ಷಗಳೂ ಬಯಸುತ್ತವೆ. ಹೀಗಾಗಿ ಅಧಿಕ ಮತ ಚಲಾವಣೆಯಾದರೆ ಒಂದು ಪಕ್ಷಕ್ಕೆ ಹೆಚ್ಚು ಅನುಕೂಲ ಎಂಬ ಮಾತು ಅಷ್ಟೇನು ಸರಿಯಲ್ಲ. ಮತದಾರರು ಸ್ಪಷ್ಟ ತೀರ್ಮಾನ ಮಾಡಿಯೇ ಮತಗಟ್ಟೆಗೆ ಬಂದಿರುತ್ತಾರೆ. ನಮ್ಮ ಕೆಲಸಗಳಷ್ಟೇ ನಮ್ಮ ಕೈಹಿಡಿಯು ವಂತಹವು ಎಂಬ ಬಲವಾದ ಭಾವನೆ ಬಿಜೆಪಿಯದು.
‘ಯುವಕರು, ಮಹಿಳೆಯರಲ್ಲಿ ಅರ್ಧಕ್ಕರ್ಧ ಮಂದಿ ಹಾಗೂ ಸುಶಿಕ್ಷತರೆಲ್ಲರೂ ಬಿಜೆಪಿಗೆ ಮತ ಚಲಾಯಿಸಿರುವ ವಿಶ್ವಾಸ ಇದೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅಶೋಕ್ ಜೀರೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾಂಗ್ರೆಸ್ ಈ ಬಾರಿ 1.60 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ಮತದಾನ ಕೊನೆಗೊಂಡ ತಕ್ಷಣವೇ ಫೇಸ್ಬುಕ್ನಲ್ಲಿ ಬರೆದುಕೊಂಡಿ ರುವೆ. ನಮ್ಮ ಆಂತರಿಕ ಸಮೀಕ್ಷೆ, ಮತಗಟ್ಟೆ ಗಳ ಸಮೀಪದ ನಮ್ಮ ಪ್ರತಿನಿಧಿಗಳ ಮಾಹಿತಿ ಪಡೆದೇ ಈ ಲೆಕ್ಕಾಚಾರ ಮಾಡಿದ್ದೇವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ನಿಂಬಗಲ್ ತಿಳಿಸಿದರು.
ಮೋದಿ ಬಲ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28ರಂದು ನಗರಕ್ಕೆ ಬಂದು ಪ್ರಚಾರ ಭಾಷಣ ಮಾಡಿದ್ದು ದೊಡ್ಡ ಮಟ್ಟಿಗೆ ಪರಿಣಾಮ ಬೀರಿದೆ, ಗ್ಯಾರಂಟಿಗಳ ಆಮಿಷವನ್ನು ಜನ ಮನದಲ್ಲಿ ಇಟ್ಟುಕೊಂಡಿಲ್ಲ. ಮೋದಿ ಬಲವೇ ಪಕ್ಷವನ್ನು ದಡ ಸೇರಿಸುವುದು ನಿಶ್ಚಿತ. ಹೊಸಪೇಟೆ ಸಹಿತ ಪಶ್ಚಿಮ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ದೊಡ್ಡದಾಗಿಯೇ ಇದೆ. ಕಂಪ್ಲಿ ಭಾಗದಲ್ಲಿ ಶೇ 50ರಷ್ಟು ಮಂದಿ ಬಿಜೆಪಿಗೆ ಬೆಂಬಲವಾಗಿದ್ದಾರೆ. ಸಂಡೂರು ಗ್ರಾಮಾಂತರ ಭಾಗದಲ್ಲಿ ಸಹ ಬಿಜೆಪಿಗೆ ಒಲವು ಕಾಣಿಸಿತ್ತು. ಉಳಿದೆಡೆ ಸಾಂಪ್ರದಾಯಿಕ ಬಿಜೆಪಿ ಮತಗಳು ಎಲ್ಲೂ ಹೋಗುವುದಿಲ್ಲ ಎಂಬ ನಂಬಿಕೆ ಇದೆ. ಈ ಎಲ್ಲ ಲೆಕ್ಕಾಚಾರದಿಂದ ಪಕ್ಷದ ಅಭ್ಯರ್ಥಿ ಬಿ.ಶ್ರೀರಾಮುಲು ಸುಲಭವಾಗಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಅಶೋಕ್ ಜೀರೆ ತಿಳಿಸಿದರು.
ಕಾಂಗ್ರೆಸ್ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದಕ್ಕೆ ಗ್ಯಾರಂಟಿ ಮಾತ್ರ ಕಾರಣ ಅಲ್ಲ ಎಂಬುದು ರಾಮಕೃಷ್ಣ ಅವರ ಲೆಕ್ಕಾಚಾರ. ‘ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನೆಲ್ಲ ಬಿಟ್ಟು ಸಂಘಟಿತ ಯತ್ನ ಮಾಡಲಾಯಿತು. ಸಿರಾಜ್ ಶೇಖ್, ರಾಣಿ ಸಂಯುಕ್ತಾ, ಶಾಸಕ ಎಚ್.ಆರ್.ಗವಿಯಪ್ಪ ಅವರ ತಂಡಗಳು ಹಾಗೂ ಇನ್ನೊಂದು ತಂಡ ನಡೆಸಿದ ಸಂಘಟಿತ ಕಾರ್ಯಾಚರಣೆಗಳು ಹಾಗೂ ಮಾಹಿತಿಗಳು ಸೋರಿಕೆಯಾ ಗದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದ ರಿಂದ ಎದುರಾಗಳಿಗಳಿಗೆ ನಮ್ಮ ಯೋಜನೆ ಗಳನ್ನು ಹೈಜಾಕ್ ಮಾಡುವುದು ಸಾಧ್ಯವಾಗಲಿಲ್ಲ. ಇದರಿಂದ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ’ ಎಂದರು.
ಫಲಿತಾಂಶಕ್ಕಾಗಿ ಕ್ಷೇತ್ರದ ಮತದಾರರು 25 ದಿನ ಕಾಯಲೇಬೇಕಿದ್ದು, ದಿನಗಳೆದಂತೆ ಬಿಸಿಲಿನ ಝಳ ತೀವ್ರವಾಗಲಿದ್ದು, ಫಲಿತಾಂಶ ಏನಾಗಬಹುದು ಎಂಬ ಕುತೂಹಲವೂ ಹೆಚ್ಚಾಗುವ ಸಾಧ್ಯತೆ ಇದೆ.
ಬೆಟ್ಟಿಂಗ್ ಶುರು?
ಐಪಿಎಲ್ ಕ್ರಿಕೆಟ್ ಜ್ವರದ ನಡುವೆಯೇ ಇದೀಗ ಬಳ್ಳಾರಿ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬ ಬೆಟ್ಟಿಂಗ್ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ‘ಸದ್ಯ ದುಡ್ಡು ಇಟ್ಟು ಬೆಟ್ಟಿಂಗ್ ನಡೆಯುತ್ತಿಲ್ಲ. ಮುಂದೆ ಏನೋ ಗೊತ್ತಿಲ್ಲ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬೆಟ್ ಕಟ್ಟುವವರೇ ಜಾಸ್ತಿ ಇದ್ದಂತೆ ಕಾಣಿಸುತ್ತಿದೆ’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.