ಕೂಡ್ಲಿಗಿ (ವಿಜಯನಗರ ಜಿಲ್ಲೆ): ಪಟ್ಟಣದ 3ನೇ ವಾರ್ಡಿನ ಡಿ. ಹರ್ಷಿತ್ ನೆದರ್ಲೆಂಡಿನಿಂದ ಬಂದು ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹರ್ಷಿತ್ ನೆದರ್ಲೆಂಡ್ಸ್ನಲ್ಲಿ ಎಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದು, ಅವರು ರಜೆಯ ಮೇಲೆ ಜನವರಿಯಲ್ಲಿಯೇ ಭಾರತಕ್ಕೆ ಬರಬೇಕಾಗಿತ್ತು. ಆದರೆ ಮೇ ತಿಂಗಳಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂದು ಅವರ ತಂದೆ ಶಿಕ್ಷಕ ದುಗ್ಗಪ್ಪ ಮಾಹಿತಿ ನೀಡಿದ್ದರು. ಇದರಿಂದ ಹರ್ಷಿತ್ ತಮ್ಮ ರಜೆಯನ್ನು ಮುಂದಕ್ಕೆ ಹಾಕಿಕೊಂಡು ಇದೀಗ ತಮ್ಮ ತಾಯ್ನಾಡಿಗೆ ಹಿಂದುರುಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 28ರಲ್ಲಿ ಮತದಾನ ಮಾಡಿದರು. ಇವರ ಜೊತೆಗೆ ಇವರ ಪತ್ನಿಯೂ ಬಂದಿದ್ದು, ಅವರು ಶಿವಮೊಗ್ಗ ಕ್ಷೇತ್ರದ ಸಾಗರದಲ್ಲಿ ಮತದಾನ ಮಾಡಿದ್ದಾರೆ.
ನಂತರ ಮಾತನಾಡಿದ ಅವರು, ಮತದಾನ ಪವಿತ್ರ ಕರ್ತವ್ಯವಾಗಿದ್ದು, ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಎಲ್ಲೆಡೆ ನೀರಿನ ಸಮಸ್ಯೆ ಉದ್ಬವವಾಗಿದ್ದು, ನೀರಿನ ರಕ್ಷಣೆ ಜೊತೆಗೆ ಪರಿಸರ ರಕ್ಷಣೆ ಮಾಡುವ ಕೆಲಸಕ್ಕೆ ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು ಎಂದರು.