ಕೂಡ್ಲಿಗಿ (ವಿಜಯನಗರ ಜಿಲ್ಲೆ): ಮೋದಿ ಪ್ರಧಾನಿಯಾಗಿ ಇಡೀ ದೇಶದ ಜನರ ಕೈಗೆ ಚೊಂಬು ಕೊಟ್ಟರು. ಶ್ರೀರಾಮುಲು ಸಚಿವರಾಗಿ, ಸಂಸದರಾಗಿ ಬಳ್ಳಾರಿ ಜಿಲ್ಲೆಗೆ ಚೊಂಬು ಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರ ಗೆಲುವಿನ ಸಂದೇಶ ನೀಡಲು ಇಲ್ಲಿ ಸೋಮವಾರ ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಅಚರು ಮಾತನಾಡಿದರು.
'ಮೋದಿ ಮತ್ತು ಶ್ರೀರಾಮುಲು ಬಳ್ಳಾರಿ ಜನಕ್ಕೆ ಕೊಟ್ಟ ಚೊಂಬನ್ನು ನೀವು ಶ್ರೀರಾಮುಲು ಕೈಗೆ ವಾಪಸ್ ಕೊಡಿ' ಎಂದು ಮತದಾರರಿಗೆ ಸಲಹೆ ನೀಡಿದರು.
ಮೋದಿಗೆ ಸೋಲು ಖಚಿತವಾಗಿದೆ: ತಾವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಮೋದಿ ಅವರಿಗೆ ಖಚಿತವಾಗಿದೆ.
ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿರುವುದಕ್ಕೆ ಸೋಲಿನ ಭಯವೇ ಕಾರಣ. ಸೋಲು ಖಚಿತವಾಗುತ್ತಿದ್ದಂತೆ ಹೆಚ್ಚೆಚ್ಚು ಸುಳ್ಳುಗಳನ್ನು ಸೃಷ್ಟಿಸಿ ಭಾರತೀಯರ ನಡುವೆ ಬಿರುಕು ಮೂಡಿಸುತ್ತಾರೆ. ಇದರ ಬಗ್ಗೆ ಜಾಗ್ರತೆ ವಹಿಸಿ ಎಂದು ಸಿ.ಎಂ.ಎಚ್ಚರಿಕೆ ನೀಡಿದರು.
'ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿರುವುದಕ್ಕೆ ಸೋಲಿನ ಭಯವೇ ಕಾರಣ. ಬಿಜೆಪಿ 200 ಸ್ಥಾನ ಗೆದ್ದರೆ ಹೆಚ್ಚು ಎನ್ನುವ ಸಮೀಕ್ಷೆಗಳು ಬಂದಿವೆ. ತಮ್ಮ ಸೋಲನ್ನು ಖಚಿತಪಡಿಸುವ ಸಮೀಕ್ಷೆಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದರು.
'ಮೋದಿ ಮಾಮೂಲಾಗಿಯೇ ಹಸಿ ಹಸಿ ಸುಳ್ಳು ಹೇಳುತ್ತಾರೆ. ಈಗ ಇವರ ಸೋಲಿನ ಖಚಿತ ಸಮೀಕ್ಷೆಗಳು ಬರುತ್ತಿದ್ದಂತೆ ಭಯಾನಕವಾದ ಸುಳ್ಳುಗಳನ್ನು ಸೃಷ್ಟಿಸಿ ಹೋದಲ್ಲಿ ಬಂದಲ್ಲಿ ಸುಳ್ಳು ಹಂಚುತ್ತಾ ಅಡ್ಡಾಡುತ್ತಾರೆ. ಇವರ ಸುಳ್ಳುಗಳಿಗೆ ಭಾರತೀಯರು ಮತ್ತೆ ಮತ್ತೆ ತಲೆ ಒತ್ತೆ ಇಡುವುದಿಲ್ಲ' ಎಂದರು.
ಮೀಸಲಾತಿ ವಿಷಯ ಪ್ರಸ್ತಾಪಿಸಿ ಹಿಂದುಳಿದವರನ್ನು ಮುಸ್ಲುಮರ ವಿರುದ್ಧ ಎತ್ತಿಕಟ್ಟುವ ಮೋದಿ ಸ್ಕೆಚ್ ವಿಫಲಗೊಳಿಸಿ ಎಂದು ಕರೆ ನೀಡಿದರು.
ಮಹಿಳೆಯರ ಖಾತೆಗೆ ಒಂದು ಲಕ್ಷ ರೂಪಾಯಿ-ಇಡೀ ದೇಶದ ರೈತರ ಸಾಲ ಮನ್ನಾ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಬಂದು ಬೀಳತ್ತೆ. ನಿರುದ್ಯೋಗಿಗಳ ಖಾತೆಗೂ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ. ಇಡೀ ದೇಶದ ರೈತರ ಸಾಲ ಮನ್ನಾ ಆಗುತ್ತದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಕಾಂಗ್ರೆಸ್ ನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಇಡೀ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅಂಬಾನಿ, ಅದಾನಿಯಂತಹ ಆಗರ್ಭ ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ಒಪ್ಪದ ಮೋದಿ ಯಾರ ಪರ ಎನ್ನುವುದನ್ನು ದೇಶದ ಜನರಿಗೆ ಮನವರಿಕೆಯಾಗಿದೆ ಎಂದು ಸಿ.ಎಂ ಹೇಳಿದರು.
'ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಗೆಲ್ಲಲೇಬೇಕು. ಶ್ರೀರಾಮುಲು ಸೋಲಲೇಬೇಕು. ಇದು ನನ್ನ ಸ್ಪಷ್ಟ ತೀರ್ಮಾನ. ನನ್ನ ತೀರ್ಮಾನಕ್ಕೆ ಮತ್ತುತುಕಾರಾಂ ಅವರಿಗೆ ಆಶೀರ್ವದಿಸಿ' ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ ಸೇರಿ ವಿಜಯನಗರ, ಬಳ್ಳಾರಿ ಜಿಲ್ಲೆಯ ಶಾಸಕರುಗಳು, ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದು ಈ.ತುಕಾರಾಂ ಅವರ ಗೆಲುವಿಗೆ ಶಪಥ ಮಾಡಿದರು.
ಮೋಹನ್ ಭಾಗವತ್ ಭಯಾನಕ ಸುಳ್ಳು ಹೇಳಿದ್ದಾರೆ
'ತಾವು ಮೀಸಲಾತಿಗೆ ವಿರುದ್ಧವಿಲ್ಲ ಎಂದು ಸಂಘ ಪರಿವಾರದ ಮೋಹನ್ ಭಾಗವತ್ ಹೇಳಿರುವುದು ಹಸಿ ಸುಳ್ಳು. ಮೀಸಲಾತಿ ವಿರೋಧಿಸಿ ರಾಜ್ಯಸಭಾ ಸದಸ್ಯ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಾಮಾ ಜೋಯಿಸ್ ಕೋರ್ಟ್ ಮೆಟ್ಟಿಲೇರಿದ್ದು ದೇಶದ ಹಿಂದುಳಿದ ಸಮುದಾಯಗಳು ಮರೆತಿಲ್ಲ. ಮಂಡಲ್ ವರದಿಗೆ ವಿರೋಧ ಮಾಡಿ ಹಿಂದುಳಿದ ಜಾತಿ-ಸಮುದಾಯಗಳ ಮಕ್ಕಳನ್ನು ಆತ್ಮಹತ್ಯೆಗೆ ತಳ್ಳಿದ್ದು ಇದೇ ಬಿಜೆಪಿ. ಇಂಥಾ ಹಲವು ಉದಾಹರಣೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು ಬಿಜೆಪಿ ಪರಿವಾರ ಹುಟ್ಟಿನಿಂದಲೇ ಮೀಸಲಾತಿ ವಿರೋಧಿಗಳು. ಆದರೆ ಸುಳ್ಳುಗಳ ಮೂಲಕ ಹಿಂದುಳಿದವರನ್ನು ಪದೇ ಪದೇ ವಂಚಿಸುವುದು ಇವರಿಗೆ ರೂಢಿಯಾಗಿದೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.