ಕೂಡ್ಲಿಗಿ (ವಿಜಯನಗರ ಜಿಲ್ಲೆ): ನರೇಗಾ ಕೂಲಿ ಕಾರ್ಮಿಕ ಎಚ್. ಸಿದ್ದಪ್ಪ (62) ಎಂಬುವರು ಎದೆ ನೋವಿನಿಂದ ಮಂಗಳವಾರ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಎ. ದಿಬ್ಬದಹಳ್ಳಿ ಗ್ರಾಮದ ಎಚ್. ಸಿದ್ದಪ್ಪ ಅವರು ದಿಬ್ಬದಹಳ್ಳಿ-ಹರವದಿ ಬಳಿಯ ಆರಣ್ಯದಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾಗ ತೀವ್ರ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ ಅವರ ಹೆಂಡತಿ ಶಿವಮ್ಮ ಹಾಗೂ ನರೇಗಾ ಸಿಬ್ಬಂದಿ ಉಪಚರಿಸಿ ಮನೆಗೆ ಕರೆದೊಯ್ದರು. ಪುನಃ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.