ಹೊಸಪೇಟೆ (ವಿಜಯನಗರ): ಪದವಿ ನಕಲಿ ಅಂಕಪಟ್ಟಿ ಮತ್ತು ಮೈಗ್ರೇಶನ್ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಮುಂಬಡ್ತಿ ಪಡೆದಿದ್ದ ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯ್ತಿ ಯೋಜನಾಧಿಕಾರಿ ಉಮೇಶಗೌಡ ವೆಂಕನಗೌಡರ್ ಅವರನ್ನು ಅಮಾನತುಗೊಳಿಸಿ, ಹಿಂಬಡ್ತಿ ಕೊಟ್ಟು ಸರ್ಕಾರ ಆದೇಶ ಹೊರಡಿಸಿದೆ.
ಸಹಾಯಕ ನಿರ್ದೇಶಕರ ಹುದ್ದೆಯ ಮುಂಬಡ್ತಿಯನ್ನು ರದ್ದುಗೊಳಿಸಿ, ಹಿಂಬಡ್ತಿ ಕೊಟ್ಟು ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ಸಾಂಖಿಕ ಅಧಿಕಾರಿ ಹುದ್ದೆಗೆ ಸ್ಥಳ ಮರುನಿಯುಕ್ತಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
‘ಅನುಕಂಪ ಆಧಾರದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಕೆಲಸ ಪಡೆದ ಉಮೇಶಗೌಡ ಮುಂಬಡ್ತಿಗಾಗಿ 2007, 2008, 2009ನೇ ಸಾಲಿನಲ್ಲಿ ಮೈಸೂರಿನ ಮಾನಸಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪದವಿ ನಕಲಿ ಅಂಕಪಟ್ಟಿಗಳು, ಪಾಸಿಂಗ್ ಸರ್ಟಿಫಿಕೆಟ್ ಹಾಗೂ ಮೈಗ್ರೇಶನ್ ಪ್ರಮಾಣ ಪತ್ರಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವುಗಳನ್ನು ಸರ್ಕಾರಕ್ಕೆ ಸಲ್ಲಿಸಿ ತಾಲ್ಲೂಕು ಯೋಜನಾಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದು ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯ್ತಿಯಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೈಲಾ ಎಸ್. ಕುಲಕರ್ಣಿ ಅವರು ಸೆ. 13ರಂದು ಹಗರಿಬೊಮ್ಮನಹಳ್ಳಿ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದರಿಂದ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವರದಿ ಆಧರಿಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಅವರು ಉಮೇಶಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.