ಆಲಮಟ್ಟಿ (ವಿಜಯಪುರ):ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಮುಂಜಾಗ್ರತೆ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.
3 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡುತ್ತಿರುವುದರಿಂದ ಆಲಮಟ್ಟಿ ಜಲಾಶಯದ ಕೃಷ್ಣಾ ನದಿ ತಳಪಾತ್ರದಲ್ಲಿ ಬೆಳೆ ಜಲಾವೃತಗೊಳ್ಳುವ ಆತಂಕ ಎದುರಾಗಿದೆ.ಇದಕ್ಕೆ ಸಮನಾಂತರವಾಗಿ ನಾರಾಯಣಪುರ ಜಲಾಶಯದಿಂದಲೂ 3 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ಮುಂದಿನ ಎರಡು ಮೂರು ದಿನಗಳ ಕಾಲ ಪ್ರವಾಹದ ಆತಂಕ ಇರಲಿದೆ.
26 ಗೇಟ್ಗಳಿಂದ ನೀರು:ಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್ಗಳಿಂದ 2,57,500 ಕ್ಯುಸೆಕ್ ಹಾಗೂ ವಿದ್ಯುತ್ ಮೂಲಕ 42,500 ಕ್ಯುಸೆಕ್ ಸೇರಿ 3 ಲಕ್ಷ ಕ್ಯುಸೆಕ್ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.24 ಗೇಟ್ಗಳನ್ನು 2.10 ಮೀಟರ್ ಹಾಗೂ ಎರಡು ಗೇಟ್ಗಳನ್ನು 0.8 ಮೀಟರ್ ಎತ್ತರಿಸಿ ನೀರು ಬಿಡಲಾಗುತ್ತಿದೆ.
517 ಮೀಗೆ ಸೀಮಿತ:ಸದ್ಯ ಪ್ರವಾಹದ ಸ್ಥಿತಿಯಿದ್ದು 519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517.30 ಮೀ ವರೆಗೆ ನೀರಿದೆ. ಮುಂಜಾಗ್ರತೆಯ ಕ್ರಮವಾಗಿ ಜಲಾಶಯದಲ್ಲಿ 517 ಮೀ ವರೆಗೆ ಮಾತ್ರ ನೀರು ಸಂಗ್ರಹಿಸಲಾಗುವುದು, ಸದ್ಯ ಜಲಾಶಯಕ್ಕೆ 1.40 ಲಕ್ಷ ಕ್ಯುಸೆಕ್ ಒಳಹರಿವು ಇದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.
ಕರ್ನಾಟಕದ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು ಸಂಜೆಯ ವೇಳೆಗೆ 1.99 ಲಕ್ಷ ಕ್ಯುಸೆಕ್ ತಲುಪಿದೆ. ಘಟಪ್ರಭಾದಿಂದಲೂ 40 ಸಾವಿರ ಕ್ಯುಸೆಕ್ ನೀರು ಬರಲಿದೆ.ಕೊಯ್ನಾ ಸೇರಿದಂತೆ ಬಹುತೇಕ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ನದಿಗೆ ನೀರು ಬಿಡಲಾಗುತ್ತಿದೆ. ಹೀಗಾಗಿ ಮುಂದಿನ ಒಂದೆರೆಡು ದಿನಗಳಲ್ಲಿ ಆಲಮಟ್ಟಿ ಜಲಾಶಯಕ್ಕೆ 2.5 ಲಕ್ಷ ದಿಂದ 3 ಲಕ್ಷ ಕ್ಯುಸೆಕ್ ವರೆಗೆ ನೀರು ಬರಲಿದೆ ಎಂದು ತಿಳಿಸಿದರು.