ಆಲಮಟ್ಟಿ (ವಿಜಯಪುರ ಜಿಲ್ಲೆ): ‘ಮಹಾರಾಷ್ಟ್ರದ ಕೃಷ್ಣಾ ನದಿಪಾತ್ರದಲ್ಲಿ ಆಗಸ್ಟ್ನಲ್ಲಿ ಸಂಭವಿಸಿದ ನೆರೆಗೆ ರಾಜ್ಯದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯದಲ್ಲಿನ ನೀರಿನ ಸಂಗ್ರಹ ಕಾರಣವಲ್ಲ’ ಎಂದು ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ನೀರಾವರಿ ತಜ್ಞ ವಡನೆರೆ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ಪಾತ್ರದಗುಂಟ ಸುಮಾರು ಆರು ತಿಂಗಳ ಕಾಲ ಅಧ್ಯಯನ ನಡೆಸಿ ತಾಂತ್ರಿಕ ವರದಿ ತಯಾರಿಸಿರುವ ಸಮಿತಿ, ಕೊಲ್ಹಾಪುರ ಹಾಗೂ ಸಾಂಗ್ಲಿಯಲ್ಲಿ ಉಂಟಾದ ನೆರೆ ಹಾಗೂ ನೆರೆಯಿಂದಾದ ಹಾನಿಗೆ ನದಿಪಾತ್ರದಲ್ಲಿನ ಅತಿಕ್ರಮಣ, ಕಾನೂನು ಬಾಹಿರ ಕಟ್ಟಡಗಳ ನಿರ್ಮಾಣಗಳೇ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದೆ.
ವಡನೆರೆ ಸಮಿತಿ ಬುಧವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ ಠಾಕ್ರೆ ಅವರಿಗೆ ಈ ವರದಿ ಸಲ್ಲಿಸಿದೆ.
‘ಮಹಾರಾಷ್ಟ್ರವು ಕೃಷ್ಣಾ ನದಿ ಪಾತ್ರದಲ್ಲಿ ಉಂಟಾಗುವ ಪ್ರವಾಹಕ್ಕೆ ಆಲಮಟ್ಟಿ ಜಲಾಶಯ ಕಾರಣ ಎಂದು ಹಲವು ವರ್ಷಗಳಿಂದ ವಾದ ಮಾಡುತ್ತಿತ್ತು. ಆದರೆ, ಆ ರಾಜ್ಯ ಸರ್ಕಾರವೇ ರಚಿಸಿದ್ದ ನೀರಾವರಿ ತಜ್ಞ ವಡನೆರೆ ನೇತೃತ್ವದ ತಂಡ ಅದನ್ನು ಅಲ್ಲಗಳೆದಿದೆ’ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ತಿಳಿಸಿದರು.
ಕೃಷ್ಣಾ ನದಿಗೆ ಮಹಾಪೂರ ಬಂದಾಗ ಮಹಾರಾಷ್ಟ್ರದ ಸಾಂಗ್ಲಿ, ಮಿರಜ್, ಕೊಲ್ಹಾಪುರ ಭಾಗದಲ್ಲಿ ನೀರು ನುಗ್ಗಿ ಹಾನಿ ಸಂಭವಿಸುತ್ತದೆ. ಇದಕ್ಕೆಲ್ಲಾ ಕರ್ನಾಟಕದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯಗಳೇ ಕಾರಣ ಎಂಬುದು ಮಹಾರಾಷ್ಟ್ರದ ಆರೋಪವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.