ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಬೆನಕನ ಆರಾಧನೆಯಲ್ಲೂ ಬಿಜೆಪಿ ಬಣ ರಾಜಕಾರಣ..!

ಬಿಜೆಪಿಯೊಳಗಿನ ಎಂ.ಬಿ.ಪಾಟೀಲ ಅಭಿಮಾನಿಗಳು; ಗಣೇಶ ಹಬ್ಬದ ಶುಭಾಶಯ ಫ್ಲೆಕ್ಸ್‌ನಲ್ಲಿ ರಾರಾಜಿಸುವಿಕೆ
Last Updated 18 ಸೆಪ್ಟೆಂಬರ್ 2018, 9:36 IST
ಅಕ್ಷರ ಗಾತ್ರ

ವಿಜಯಪುರ:ನಗರದ ಹೃದಯಭಾಗ, ಪ್ರತಿಷ್ಠಿತ ಗಾಂಧಿಚೌಕ್‌ ಇದೀಗ ಫ್ಲೆಕ್ಸ್‌ಗಳ ಅಬ್ಬರದಿಂದ ರಾರಾಜಿಸುವ ಜತೆಗೆ, ಕುತೂಹಲದ ಕೇಂದ್ರವಾಗಿದೆ.

ಗಣೇಶ ಚತುರ್ಥಿಗೂ ಮುನ್ನವೇ ಗಾಂಧಿಚೌಕ್‌ ಫ್ಲೆಕ್ಸ್‌ಗಳಿಂದ ತುಂಬಿತ್ತು. ವಿಸರ್ಜನೋತ್ಸವ ಮುಗಿಯುವ ತನಕವೂ ಬಿಜೆಪಿ ಬಣ ರಾಜಕಾರಣದ ವಿಭಿನ್ನ ಮಜಲುಗಳು, ಗಜಾನನ ಮಂಡಳಗಳ ಒಳಸುಳಿಯ ರಾಜಕಾರಣದ ಚರ್ಚೆಗೆ ಇವು ಗ್ರಾಸವೊದಗಿಸಿರುವುದು ವಿಶೇಷ.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾರಥ್ಯದಲ್ಲಿ ನಗರದಲ್ಲಿ ಎರಡು ಗಜಾನನ ಮಂಡಳಿಗಳು ಕಾರ್ಯಾಚರಿಸುತ್ತಿವೆ. ಮಂಡಳಿಯ ಜತೆ ಜತೆಗೆ ಕೆಲ ರಾಜಕಾರಣಿಗಳು ಶುಭಾಶಯ ಕೋರಲು ಅಳವಡಿಸಿರುವ ಫ್ಲೆಕ್ಸ್‌ಗಳು ಇದೀಗ ಎಲ್ಲೆಡೆ ಚರ್ಚೆಗೊಳಪಟ್ಟಿವೆ.

ಎರಡೂ ಗಜಾನನ ಮಹಾಮಂಡಳಗಳು ಈ ವರ್ಷದ ಉತ್ಸವಕ್ಕೆ ಅಧ್ಯಕ್ಷರ ಆಯ್ಕೆಯಲ್ಲೇ ಪರಸ್ಪರ ಟಾಂಗ್‌ ನೀಡಿದವು. ಅಪ್ಪು ಸಾರಥ್ಯದ ಮಹಾಮಂಡಳ ಎಬಿವಿಪಿ, ಬಿಜೆಪಿ ಯುವ ಮೋರ್ಚಾ ಮುಖಂಡ ಶರತ್‌ ಬಿರಾದಾರನನ್ನು ಅಧ್ಯಕ್ಷರನ್ನಾಗಿ ಘೋಷಿಸುವ ಮೂಲಕ ಯತ್ನಾಳಗೆ ಪರೋಕ್ಷ ಸಂದೇಶ ರವಾನಿಸಿತು.

ಇದಕ್ಕೆ ಪ್ರತಿಯಾಗಿ ಯತ್ನಾಳ ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿತಗೊಳ್ಳುತ್ತಿರುವ ಶಶಿಧರ ಗೋಪಾಲ ಅಥರ್ಗಾನನ್ನು ಅಧ್ಯಕ್ಷನನ್ನಾಗಿ ಘೋಷಿಸುವ ಮೂಲಕ ತನ್ನ ಎದುರಾಳಿ ಪಾಳೆಯಕ್ಕೆ ತಿರುಗೇಟು ನೀಡಿದ್ದು ಭಾರಿ ಸದ್ದು ಮಾಡಿತು. ಇದು ಬಿಜೆಪಿ ನಗರ ಮಂಡಲದ ಬಣ ರಾಜಕಾರಣವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿತು.

ಫ್ಲೆಕ್ಸ್‌ನಲ್ಲೂ ಬಣ

ಶುಭಾಶಯ ಕೋರುವ ಫ್ಲೆಕ್ಸ್‌ಗಳಲ್ಲೂ ಬಿಜೆಪಿ ಬಣ ರಾಜಕಾರಣ ವಿಜೃಂಭಿಸುತ್ತಿದೆ. ಇದರ ಜತೆಗೆ ಬಬಲೇಶ್ವರ ಶಾಸಕ, ಕಾಂಗ್ರೆಸ್‌ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲರ ಬಿಜೆಪಿಯೊಳಗಿನ ಅಭಿಮಾನಿಗಳು ಯಾರ‍್ಯಾರು ಎಂಬುದನ್ನು ಪ್ರದರ್ಶಿಸಿದೆ.

ವಿಜಯಪುರ ಮಹಾನಗರ ಪಾಲಿಕೆಯ ಉಪ ಮೇಯರ್‌ ಗೋಪಾಲ ಘಟಕಾಂಬಳೆ, ಶಂಕರ ಕುಂಬಾರ ಬಿಜೆಪಿಯ ಕಾರ್ಪೊರೇಟರ್‌ಗಳು. ಮಾಜಿ ಸಚಿವ ಅಪ್ಪು ಬೆಂಬಲಿಗರು. ಗಣೇಶ ಹಬ್ಬದ ಶುಭಾಶಯ ಕೋರುವ ತಮ್ಮ ಜಾಹೀರಾತು ಫಲಕದಲ್ಲಿ ಒಂದೆಡೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಯ ಭಾವಚಿತ್ರ ಪ್ರಕಟಿಸಿದ್ದರೆ, ಮತ್ತೊಂದು ಮಗ್ಗುಲಲ್ಲಿ ಎಂ.ಬಿ.ಪಾಟೀಲ ಭಾವಚಿತ್ರ ಹಾಕುವ ಮೂಲಕ ತಮ್ಮ ಅಭಿಮಾನ, ನಿಷ್ಠೆ ಮೆರೆದಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್‌ಗೆ, ಕಾಂಗ್ರೆಸ್‌ನಿಂದ ಮತ್ತೆ ಬಿಜೆಪಿಗೆ ಮರಳಿರುವ ಮಾಜಿ ಮೇಯರ್‌ ಸಂಗೀತಾ ಪೋಳ ಇದಕ್ಕೆ ಪ್ರತಿಸ್ಪರ್ಧಿ ಎನ್ನುವಂತೆ ಒಂದೆಡೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇನ್ನೊಂದೆಡೆ ಎಂ.ಬಿ.ಪಾಟೀಲರ ಭಾವಚಿತ್ರ ಬಳಸಿ ತಮ್ಮ ಸ್ವಾಮಿ ನಿಷ್ಠೆ ಮೆರೆದಿದ್ದಾರೆ. ಪೋಳ ಬಸನಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರು.

ಇದು ಕೆಲ ಪಕ್ಷ ನಿಷ್ಠ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎರಡೂ ಬಣಗಳು ಪರಸ್ಪರ ಕಾಲೆಳೆದು, ಕೆಸರೆರಚಿಕೊಳ್ಳುವುದು ನಡೆದಿದ್ದು, ಕೆಲವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಹಲವರಿಗೆ ಮನೋರಂಜನೆಯ ವಿಷಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT