ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮಗೆ ನಾವೇ ಸಂತೈಸಿಕೊಳ್ಳುವ ಪರಿಸ್ಥಿತಿ’

Last Updated 5 ಮೇ 2021, 11:22 IST
ಅಕ್ಷರ ಗಾತ್ರ

ತಾಳಿಕೋಟೆ: ಕೊರೊನಾ ಅವಧಿಯಲ್ಲಿ ಹೆತ್ತ ಕಂದಮ್ಮಗಳನ್ನು ಹತ್ತಿರ ಕರೆದು ಮುದ್ದಿಸಿಲ್ಲ, ಅಳುವ ಮಗ-ಮಗಳನ್ನು ಹತ್ತಿರ ಸೇರಿಸಿಲ್ಲ. ಜೊತೆ ಮಲಗಿ ಅಪ್ಪಿಕೊಂಡು ಮಲಗಿ ನಿದ್ರಿಸದಂತಹ ಪರಿಸ್ಥಿತಿ. ವೈಯಕ್ತಿಕ ಸಂತೋಷ ಬಿಟ್ಟು ರೋಗಿಗಳ ಆರೋಗ್ಯ ಸೇವೆ ಮಾಡುತ್ತಿದ್ದೇವೆ.

ಹೀಗೆಂದವರು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 15 ವರ್ಷಗಳಿಂದ ಶುಶ್ರೂಷಕ ಅಧಿಕಾರಿಯಾಗಿರುವ ಜ್ಯೋತಿ ಮಲ್ಲಿಕಾರ್ಜುನ ಬೋರಾಮಣಿ(ಕೋಳೂರಗಿ).

ಹತ್ತಿರವಿದ್ದರೂ ಮಕ್ಕಳನ್ನು ಮುದ್ದಿಸದಿರುವಂತಹ ಸ್ಥಿತಿ ಯಾವ ತಾಯಿಗೂ ಬರದಿರಲಿ. ಮಕ್ಕಳನ್ನು ನೆನೆದರೆ ಹೃದಯ ಹಿಂಡಿದಂತಾಗುತ್ತದೆ ಎಂದು ಕಣ್ಣಚಲ್ಲಿ ನೀರು ತಂದರು.

ಆಸ್ಪತ್ರೆಯಲ್ಲಿ ನಿತ್ಯ ಕನಿಷ್ಠ ನಾಲ್ಕೈದು ಜನರಾದರೂ ಕೊರೊನಾ ರೋಗಿಗಳಿರುತ್ತಾರೆ. ಸೋಂಕಿದ್ದರೂ ಹೇಳುವುದಿಲ್ಲ. ಮಾಸ್ಕ್‌ ತೆಗೆದು ಮಾತನಾಡುತ್ತಾರೆ. ಅವರ ಉಸಿರು ಮುಖ, ಮೈಗೆ ತಾಗುತ್ತದೆ. ಸೋಂಕಿತರಿಗಿಂತ ಜೊತೆ ಬರುವವರು ತಾಳ್ಮೆಯಿಂದ ವರ್ತಿಸುವುದಿಲ್ಲ, ಸಹನೆ ಕಡಿಮೆ. ರೋಗಿಗಳ ಮೇಲಾಗಲಿ, ಜೊತೆಯಿದ್ದವರ ಮೇಲಾಗಲಿ ಆ ಕ್ಷಣಕ್ಕೆ ಕೋಪ ಬಂದರೂ ಅವರ ಸ್ಥಿತಿಯಲ್ಲಿದ್ದಾಗ ನಮ್ಮ ಪಾಡೂ ಹಾಗೇ ಇರುತ್ತದೆ ಎಂದು ಮನಸ್ಸಿಗೆ ಸಂತೈಸಿಕೊಂಡು ಕೆಲಸ ಮಾಡುತ್ತಿರುವೆ.

ಸೇವೆ ಪಡೆದವರು ಹೇಳುವ ಧನ್ಯವಾದಗಳು ಸಂತಸ ತರುತ್ತವೆ. ಇಚೇಗೆ ಪತಿಕೂಡ ಕೊರೊನಾ ಸೋಂಕು ತಗುಲಿ ವಿಜಯಪುರದಲ್ಲಿ ಚಿಕಿತ್ಸೆ ಪಡೆದು ಬಂದರು. ದೇವರು ದೊಡ್ಡವನು ಕ್ಷೇಮವಾಗಿ ಮರಳಿದರು.

ಹೆರಿಗೆ ತಜ್ಞ ವೈದ್ಯರಿಲ್ಲದಿದ್ದರೂ ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಪ್ರತಿ ತಿಂಗಳೂ ಸರಾಸರಿ 70-80 ಗರ್ಭಿಣಿಯರಿಗೆ ಸಿಜೆರಿಯನ್ ಇಲ್ಲವೇ, ಸುರಕ್ಷಿತ ಹೆರಿಗೆ ಮಾಡಿಸಿದ್ದೇವೆ. ಕೋವಿಡ್; ಲಕ್ಷಣ ಇದ್ದವರೂ ಹೆರಿಗೆ ಮಾಡಿಸಿಕೊಂಡಿದ್ದಾರೆ.

ಯಾವುದೇ ಅನಾರೋಗ್ಯ ಕಂಡು ಬಂದರೂ ತಕ್ಷಣ ವೈದ್ಯರ ಬಳಿ ಬರಬೇಕು. ವ್ಯಾಕ್ಸಿನ್ ಹಾಕಿಸಿಕೊಂಡವರು ಇಂದಿನವರೆಗೆ ತೀರಿಕೊಂಡ ವರದಿಗಳಿಲ್ಲ. ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಹಾಕಿಸಿಕೊಂಡು, ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT