ವಿಜಯಪುರ: ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಹಂತದಲ್ಲಿ ನೀಡಲಾಗುತ್ತಿರುವ ಕೋವಿಡ್-19 ಲಸಿಕೆಯನ್ನು ಯಾವುದೇ ರೀತಿಯ ಆತಂಕ ಪಡದೇ ಹಾಕಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಮನವಿ ಮಾಡಿರು.
ನಗರದ ಜಿಲ್ಲಾಸ್ಪತ್ರೆ ಕೋವಿಡ್-19 ಲಸಿಕೆ ಹಾಕಿಸಿಕೊಂಡ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್-19 ಲಸಿಕಾ ಕಾರ್ಯಕ್ರಮ ಪೂರ್ಣಗೊಳಿಸಿ, 2ನೇ ಹಂತದ ಲಸಿಕಾ ಕಾರ್ಯಕ್ರಮವನ್ನು ಫ್ರಂಟ್ ಲೈನ್ ವಾರಿಯರ್ಸ್ಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಈವರೆಗೆ 6000ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ವಾರಿಯರ್ಸ್ಗಳು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಅದರಂತೆ 50 ವರ್ಷ ಮೇಲ್ಪಟ್ಟ ಅಂಗನವಾಡಿ ಕಾರ್ಯಕರ್ತರು ಹಾಗೂ ಇತರ ಅರ್ಹ ಫಲಾನುಭವಿಗಳು ಕೋವಿಡ್ ಲಸಿಕೆ ಪಡೆದಿದ್ದು, ಈವರೆಗೆ ಯಾವುದೇ ರೀತಿಯ ಅಡ್ಡ ಪರಿಣಾಮದ ದೂರುಗಳಾಗಲಿ ಅಥವಾ ಸಮಸ್ಯೆಗಳಾಗಲಿ ಕಂಡು ಬಂದಿಲ್ಲ ಎಂದರು.
ಕೋವಿಡ್-19 ಲಸಿಕೆಯಿಂದ ವಂಚಿತರಾದವ ಮುಂಚೂಣಿ ಕಾರ್ಯಕರ್ತರು ಕೋವಿಡ್ ಲಸಿಕೆಯನ್ನು ಪಡೆಯಬೇಕು ಎಂದರು.
ಮದ್ಯಪಾನ ಮಾಡುವವರಿಗೆ ಈ ಲಸಿಕೆಯಿಂದ ತೊಂದರೆಯಾಗಬಹುದು ಎಂಬ ವದಂತಿ ಇದ್ದು, ಇದಕ್ಕೆ ಯಾರು ಕಿವಿಗೊಡಬಾರದು. ಮದ್ಯಪಾನ ಸೇವನೆ ಮಾಡುವವರಿಗೆ ಈ ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗಿರುವ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳು ಕೂಡ ಲಭ್ಯವಾಗಿಲ್ಲ. ಈ ಕುರಿತಂತೆ ಸರ್ಕಾರದಿಂದಲು ಯಾವುದೇ ಅಡ್ಡ ಪರಿಣಾಮ ಇಲ್ಲವೆಂದು ತಿಳಿಸಲಾಗಿದೆ. ತಪ್ಪದೆ ಅರ್ಹ ಫಲಾನುಭವಿಗಳು ಭಯವಿಲ್ಲದೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಆರ್. ಸಿ.ಎಚ್ ಅಧಿಕಾರಿ ಡಾ. ಮಹೇಶ ನಾಗರಬೆಟ್ಟ, ಡಾ.ಎ.ಜಿ.ಬಿರಾದಾರ ಉಪಸ್ಥಿತರಿದ್ದರು.
ಮನವಿ:
ಕೋವಿಡ್-19 ಲಸಿಕೆಯು ಅತ್ಯಂತ ಸುರಕ್ಷಿತ ಮತ್ತು ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೇ ಇರುವುದರಿಂದ ತಪ್ಪದೇ ಮತ್ತು ಆತಂಕವಿಲ್ಲದೇ ಈ ಲಸಿಕೆ ಪಡೆಯುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮನವಿ ಮಾಡಿದ್ದಾರೆ.