ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಡಿಸಿ ಟಾಂಗಾ ಪಯಣ– ಐತಿಹಾಸಿಕ ಸ್ಮಾರಕಗಳ ವೀಕ್ಷಣೆ

Last Updated 9 ಏಪ್ರಿಲ್ 2022, 6:52 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಅಧಿಕಾರಿಗಳೊಂದಿಗೆ ಟಾಂಗಾದಲ್ಲಿ(ಜಟಕಾ ಬಂಡಿ)ಕುಳಿತು ನಗರವನ್ನು ಪ್ರದಕ್ಷಿಣೆ ಹಾಕುವ ಮೂಲಕ ಐತಿಹಾಸಿಕ ಪ್ರವಾಸಿತಾಣಗಳನ್ನು ವೀಕ್ಷಿಸಿದರು.

ವಿಶ್ವ ಪ್ರಸಿದ್ಧ ಗೋಳಗುಮ್ಮಟ, ಬಾರಾ ಕಮಾನ್, ಇಬ್ರಾಹಿಂರೋಜಾ, ಜೋಡು ಗುಮ್ಮಟ, ಉಪಲಿ ಬುರ್ಜ್, ಸಿದ್ದೇಶ್ವರ ಗುಡಿ, ತಾಜ್ ಬಾವಡಿ, ಜಾಮೀಯಾ ಮಸೀದಿಗಳಿಗೆ ಟಾಂಗಾದಲ್ಲಿ ತೆರಳಿ, ವೀಕ್ಷಣೆ ಮಾಡಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ
ಟಾಂಗಾ ವಾಲಾ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಅವರು ಟಾಂಗಾದಲ್ಲಿ ತಿರುಗಾಡಿದರು.

ಈ ಸಂದರ್ಭದಲ್ಲಿ ಟಾಂಗಾವಾಲಾಗಳ ಸಮಸ್ಯೆ ಆಲಿಸಿದ ಅವರು, ಪ್ರವಾಸಿತಾಣಗಳ ಬಳಿ ಪ್ರತ್ಯೇಕ ಟಾಂಗಾ ನಿಲ್ದಾಣಕ್ಕೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಟಾಂಗಾದಲ್ಲಿ ಸಂಚರಿಸುವ ಮೂಲಕ ಪ್ರವಾಸಿತಾಣಗಳನ್ನು ವೀಕ್ಷಿಸುವಂತೆ ಕೋರಿದರು. ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಟಾಂಗಾ ವಾಲಾರನ್ನು ಈ ಮೂಲಕ ಪ್ರೋತ್ಸಾಹಿಸಬೇಕು ಎಂದರು.

ನಾನೂ ಸಹ ಪ್ರಥಮ ಬಾರಿಗೆ ಟಾಂಗಾದಲ್ಲಿ ಕುಳಿತು ಪ್ರಯಾಣ ಮಾಡಿದ್ದು, ಇದೊಂದು ಹೊಸ ಅನುಭವ, ಖುಷಿ ನೀಡಿದೆ ಎಂದರು.

ಜಿಲ್ಲಾಧಿಕಾರಿ ಅವರೊಂದಿಗೆ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಯೂರ ಆದಿಲ್ ಶಾಹಿ ಹೋಟೆಲ್ ವ್ಯವಸ್ಥಾಪಕ ಸುನೀಲ್ ಕುಮಾರ್ ಎಸ್, ಬಿಜಾಪುರ ರೋಟರಿ ಕ್ಲಬ್ ಮಾನ್ಯುಮೆಂಟ್ ಹೆರಿಟೇಜ್ ಸಿಟಿ ಅಧ್ಯಕ್ಷ ಪೀಟರ್ ಅಲೆಕ್ಝಾಂಡರ್, ಅಮಿನ್ ಹುಲ್ಲೂರು, ಇಮಾಮ್ ಹುಸೇನ್ ಹುಲ್ಲೂರು, ಸುಭಾಷ್ ವಿಕ್ರಂ, ಪ್ರವಾಸೋದ್ಯಮ ಇಲಾಖೆ ಸಮಾಲೋಚಕ ಅನಿಲ್ ಕುಮಾರ್ ಭಣಜಿಗಾರ, ಗೈಡ್ ಉಮೇಶ ರಾಠೋಡ, ಮತ್ತಿತರು ಇದ್ದರು.

ಸ್ಮಾರಕ ಸ್ವಚ್ಛತಾ ಕಾರ್ಯ:
ಮಹಾನಗರ ಪಾಲಿಕೆ ಹಾಗೂ ಸ್ವಯಂ ಸೇವಕರು ಕೈಗೊಂಡಿರುವ ನಗರದ ಐತಿಹಾಸಿಕ ಕರಿಮುದ್ದೀನ್ ಮಸೀದಿ, ಕೋಟೆಗೋಡೆ ಆವರಣದ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ವೀಕ್ಷಿಸಿದರು.

ನಗರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಮಾರಕಗಳ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಜನರು ಈ ಕಾರ್ಯದಲ್ಲಿ ಕೈಜೋಡಿಸಬೇಕು. ಸ್ಮಾರಕಗಳ ರಕ್ಷಣೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಮನವಿ: ನಗರದ ಗಗನ್ ಮಹಲ್ ನಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಅವಕಾಶ ಕಲ್ಪಸುವಂತೆ ಸಾರ್ವಜನಿಕರು ಮನವಿ ಮಾಡಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಈ‌ ಸಂಬಂಧ ಚರ್ಚಿಸಿ, ಅವಕಾಶ ನೀಡಲು ತಿಳಿಸಲಾಗುವುದು ಎಂದರು.
ಅಲ್ಲದೇ, ಪ್ರತಿದಿನ ಬೆಳಿಗ್ಗೆ 5ರಿಂದ 8ರ ವರೆಗೆ ಗಗನ್ ಮಹಲ್ -ಆನಂದ ಮಹಲ್ ಎದುರಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವ ಮೂಲಕ ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಟಾಂಗಾ ರೋಡ್ ಶೋಗೆ ಚಾಲನೆ: ಮಯೂರ ಹೋಟೆಲ್ ಮುಂಭಾಗದಿಂದ ಆರಂಭವಾದ ಟಾಂಗಾ ರೋಡ್ ಶೋಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT