ವಿಜಯಪುರ: ನಗರಕ್ಕೆ ಕುಡಿಯುವ ನೀರು ಪೂರೈಕೆ ಮೂಲಗಳಲ್ಲಿ ಒಂದಾದ ಭೂತನಾಳ ಕೆರೆ ಭರಿದಾಗಿರುವುದರಿಂದ ಬೇಸಿಗೆಯಲ್ಲಿ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಜಲಮಂಡಳಿ, ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ತಿಳಿಸಿವೆ.
ಬೇಸಿಗೆ ಆರಂಭದ ದಿನಗಳಲ್ಲೇ ಗುಮ್ಮಟನಗರಿಗೆ ನೀರಿನ ಕೊರತೆ ಎದುರಾಗಿದ್ದು, ಸಾರ್ವಜನಿಕರು ಮುಂದಿನ ನಾಲ್ಕೈದು ತಿಂಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಸಾಧ್ಯತೆ ದಟ್ಟವಾಗಿದೆ.
ಪ್ರತಿದಿನ ಮನೆ, ಮನೆಗೆ ಕಸ ಸಂಗ್ರಹಿಸಲು ಬರುವ ಮಹಾನಗರ ಪಾಲಿಕೆ ವಾಹನಗಳಲ್ಲಿ ಶನಿವಾರದಿಂದ ಈ ಸಂಬಂಧ ಸಾರ್ವಜನಿಕರ ಗಮನಕ್ಕೆ ತಂದಿರುವ ಜಲಮಂಡಳಿ, ಕುಡಿಯುವ ನೀರಿನ್ನು ಹಿತಮಿತವಾಗಿ ಬಳಕೆ ಮಾಡಬೇಕು, ಯಾವುದೇ ಕಾರಣಕ್ಕೂ ಪೋಲು ಮಾಡಬಾರದು ಎಂದು ಮನವಿ ಮಾಡಿದೆ.
ಅಲ್ಲದೇ, ಮನೆ ಮುಂದೆ ರಸ್ತೆಗೆ ದೂಳು ಹಾರಬಾರದು ಎಂಬ ಕಾರಣಕ್ಕೆ ನೀರನ್ನು ಸಿಂಪಡಿಸುವುದಾಗಲಿ, ಗಿಡ–ಮರಗಳಿಗೆ ನೀರು ಹಾಕುವುದಾಗಲಿ, ವಾಹನಗಳನ್ನು ಸ್ವಚ್ಛಗೊಳಿಸುವುದಾಗಲಿ, ಅನಗತ್ಯವಾಗಿ ಚರಂಡಿಗೆ ನೀರನ್ನು ಹರಿಬಿಟ್ಟಿರುವುದು ಕಂಡುಬಂದರೆ ಅಂತವರ ಮನೆಯ ನಳದ ಸಂಪರ್ಕವನ್ನು ಯಾವುದೇ ಮುನ್ಸೂಚನೆ, ಎಚ್ಚರಿಕೆ ನೀಡದೇ ಬಂದ್ ಮಾಡಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೃಷ್ಣಾ ನದಿಯಲ್ಲಿ ಸಾಕಷ್ಟು ನೀರಿದೆ. ಸದ್ಯ ನೀರಿನ ಕೊರತೆ ಇಲ್ಲವಾದರೂ ಮಹಾನಗರ ಪಾಲಿಕೆ ಮತ್ತು ಜಲ ಮಂಡಳಿ ನೀರಿನ ಪೂರೈಕೆಗೆ ಅಗತ್ಯ ಮುಂಜಾಗೃತಾ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ನಗರಕ್ಕೆ ಜಲಕಂಟಕ ಎದುರಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕೆಡಿಪಿ ಸಭೆ ಮತ್ತು ಮಹಾನಗರ ಪಾಲಿಕೆ ಸಭೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ಜಲಮಂಡಳಿ ಮತ್ತು ಪಾಲಿಕೆ ಅಧಿಕಾರಿಗಳು ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದೇ ಕೈಚೆಲ್ಲಿದ ಪರಿಣಾಮ ಇದೀಗ ಗುಮ್ಮಟಪುರದ ಜನ ಸಮಸ್ಯೆ ಎದುರಿಸುವಂತಾಗಿದೆ.
ಆದರೆ, ಈ ಕುರಿತು ಜಲಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುವುದೇ ಬೇರೆ. ಭೂತನಾಳ ಕೆರೆಗೆ ನೀರು ಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕೆಬಿಜಿಎನ್ಎಲ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮವೇ ಇಂದು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.