ವಿಜಯಪುರ:ಉನ್ನತ ಶಿಕ್ಷಣ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪೌರ ಕಾರ್ಮಿಕರ ಮಕ್ಕಳಿಗೆಮಹಾನಗರ ಪಾಲಿಕೆಯ ಎಸ್.ಎಫ್.ಸಿ ಅನುದಾನದಲ್ಲಿ ಉಚಿತ ಲ್ಯಾಪ್ಟಾಪ್ ಅನ್ನುಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ವಿತರಿಸಿದರು.
ವಿದ್ಯಾರ್ಥಿಗಳು ತಂತ್ರಜ್ಞಾನದ ಯುಗದಲ್ಲಿ ಹೊಸದನ್ನು ಸಂಶೋಧಿಸಲು ಹಾಗೂ ಹೆಚ್ಚಿನ ಕಲಿಕೆಗೆ ಮತ್ತು ಉನ್ನತ ವ್ಯಾಸಂಗಕ್ಕೆ ಲ್ಯಾಪ್ಟಾಪ್ ಸಹಕಾರಿಯಾಗಲಿದೆ ಎಂದು ಹೇಳಿದರು.
ಎಲ್ಲ ವರ್ಗಗಳಲ್ಲೂ ಸಮಾನತೆ ತರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂಲ ಆಶಯವಾಗಿತ್ತು, ಅದರಂತೆ ಸರ್ಕಾರದ ಎಲ್ಲ ಯೋಜನೆಗಳನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ ಎಂದರು.
ವಿಜಯಪುರವನ್ನು ರಾಜ್ಯದಲ್ಲೇ ಮಾದರಿಮತಕ್ಷೇತ್ರ ಮಾಡಲು ಸಂಕಲ್ಪ ಮಾಡಿದ್ದು, ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ವಿಜಯಪುರದ ಸುನೀತಾ ಗೋಟ್ಯಾಳ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನೀವು ಸಹ ಯುಪಿಎಸ್ಸಿ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಜಿಲ್ಲೆಗೆ ಮತ್ತು ನಾಡಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸರ್ಕಾರ ನೀಡುತ್ತಿರುವ ಎಲ್ಲ ಯೋಜನೆಗಳನ್ನು ಸಮಾಜದ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಪಡೆದುಕೊಂಡು, ಉತ್ತಮ ಜ್ಞಾನಾರ್ಜನೆ ಪಡೆದುಕೊಳ್ಳುವ ಮೂಲಕ ಈ ದೇಶದ ಸಂಪತ್ತಾಗಿ ರೂಪಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭು ದೇಸಾಯಿ, ಸಾಯಿಬಣ್ಣ ಭೂವಿ, ಬಿ.ಡಿ.ಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ,ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ, ಸಿದ್ಧೇಶ್ವರ ಸಂಸ್ಥೆ ಚೆರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗು ಸಜ್ಜನ ಉಪಸ್ಥಿತರಿದ್ದರು.