ವಿಜಯಪುರ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಯಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ.ಶ್ರೀ. ಆನಂದ ಹೇಳಿದರು.
ನಗರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಸುಭಿಕ್ಷಾ ಬಹುರಾಜ್ಯ ಸಾವಯವ ಕೃಷಿಕರ ಸಂಸ್ಥೆಯು ಆಯೋಜಿಸಿದ್ದ ಸಮಾಲೋಚನೆ ಸಭೆ, ಇಂಡಿ ತಾಲ್ಲೂಕಿನ ನಾದ ಕೆ.ಡಿ ಸರ್ಕಾರಿ ಪ್ರೌಢಶಾಲೆ ಎಸ್ಎಸ್ಎಲ್ಸಿ ವಿದ್ಯಾರ್ಥಿ ದೇವೆಂದ್ರ ಬಿ. ಬಿರಾದಾರ ಮತ್ತು ಕಾರ್ತಿಕ ನರಳೆ ರಾಷ್ಟ್ರಮಟ್ಟದ ಇನ್ಸ್ಪೈಯರ್ ಸ್ಪರ್ಧೆಯಲ್ಲಿ 18ನೇ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನಿಸಿ ಅವರು ಮಾತನಾಡಿದರು.
ರೈತರಿಗೆ ಸಾವಯವ ಕೃಷಿ ಪದ್ದತಿ ಅಳವಡಿಸಿ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡುವುದಕ್ಕಾಗಿ ಬೆಂಗಳೂರಿನಲ್ಲಿ ಮಳಿಗೆ ತೆರೆಯಲಾಗಿದೆ ಎಂದರು.
ವಿದ್ಯಾರ್ಥಿ ಅನ್ವೇಶಿಸಿದ ಕ್ರಾಪ್ ಕಟ್ಟರ್ ಬಹುಪಯೋಗಿ ಕೃಷಿ ಯಂತ್ರೋಪಕರಣವಾಗಿದ್ದು, ಇದರಿಂದ ಕೃಷಿಯಲ್ಲಿ ರೈತನಿಗೆ ಶ್ರಮ ಕಡಿಮೆಗೊಳಿಸುವ ಸಾಧನವಾಗಿದೆ. ಈ ಯಂತ್ರದಿಂದ ಬೆಳೆಯನ್ನು ರಾಶಿ ಮಾಡುವುದು, ಕಳೆ ತೆಗೆಯುವುದು, ಕೀಟನಾಶಕ ಸಿಂಪಡಿಸುವುದು, ತೋಟದಲ್ಲಿ ಹುಲ್ಲು ತೆಗೆಯುವುದು, ಬದುವಿನಲ್ಲಿ ಬೆಳೆದ ಗಿಡಗಳನ್ನು ಕತ್ತರಿಸುವುದು, ಬೆಳೆ ನಾಟಿ ಮಾಡಲು ತಗ್ಗು ಅಗೆಯುವುದು ಇತ್ಯಾದಿ ಕೆಲಸವನ್ನು ಒಂದೇ ಯಂತ್ರದಲ್ಲಿ ಮಾಡಲಾಗುವದೆಂದು ವಿದ್ಯಾರ್ಥಿಗಳು ತಿಳಿಸಿದರು.
ಮುಂದೆ ಈ ಸಾಧನಕ್ಕೆ ಪೇಟೆಂಟ್ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ ಮಾರುಕಟ್ಟೆಯಲ್ಲಿ ರೈತರಿಗೆ ಕಡಿಮೆ ಬೆಲೆಯಲ್ಲಿ ಸಿಕ್ಕು ರೈತನ ಬಾಳು ಹಸನಾಗಿಸುವಂತೆ ಮಾಡುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.
ಸುಭಿಕ್ಷಾ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಆರ್. ಟಿ.ಪಾಟೀಲ, ಕಾರ್ಯದರ್ಶಿ ಈರಣ್ಣ ಹೊಸಮನಿ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಎಸ್. ಟಿ. ಪಾಟೀಲ, ಸುನೀಲ ನಾರಾಯಣಕರ, ಅಶೋಕ ಕೋನರೆಡ್ಡಿ, ಗುರುಪಾದಪ್ಪ ಬಾಗಿ, ಶಿವಲಿಂಗಪ್ಪ ಚೋರಗಸ್ತಿ ಉಪಸ್ಥಿತರಿದ್ದರು.