ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿಲ್ಲದ ಸಾಹಿತ್ಯ ಬೇಂದ್ರೆ ಸಾಹಿತ್ಯ: ಸಂತೋಷ ಕುಲಕರ್ಣಿ

ಪಿಡಿಜೆ ಪದವಿ ಪೂರ್ವ ಕಾಲೇಜಿನಲ್ಲಿ ‘ಕವಿದಿನ’ ಕಾರ್ಯಕ್ರಮ
Last Updated 31 ಜನವರಿ 2022, 11:14 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡ ಭಾಷೆಯಲ್ಲಿ ಸಾವಿರಾರು ಕೃತಿಗಳು ರಚೆಯಾದರೂ ಕೂಡ ಸಾವಿಲ್ಲದ ಸಾಹಿತ್ಯವಾಗಿ ಗುರುತಿಸಿಕೊಂಡಿದ್ದು ಮಾತ್ರ ಬೇಂದ್ರೆ ಸಾಹಿತ್ಯ ಎಂದುಪಿಡಿಜೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ಕುಲಕರ್ಣಿ ಹೇಳಿದರು.

ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ಬೇಂದ್ರೆಯವರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ‘ಕವಿದಿನ’ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಬದುಕಿನ ಒಂದೊಂದು ಮಜಲುಗಳಿಗೂ ಕನ್ನಡಿ ಹಿಡಿಯುವ ಕಾಯಕ ಮಾಡಿದ ಬೇಂದ್ರೆಯವರು ಸಾವಿರಾರು ಹಾಡುಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಸ್ತ್ರೀ ಮೇಲಿನ ಅಪಾರವಾದ ಗೌರವದ ಫಲವಾಗಿ ಅವರಿಂದ ಹೊರಬಂದ ಒಂದೊಂದು ಕವಿತೆಗಳು ಕೂಡ ನಮ್ಮನ್ನು ಬೆಂಬಿಡದೆ ಕಾಡುತ್ತವೆ. ತಮ್ಮ ಕಾವ್ಯನಾಮದಲ್ಲಿ ಹೆತ್ತಮ್ಮನಿಗೆ ಸ್ಥಾನ ನೀಡಿದ ಅವರು ಸ್ತ್ರೀ ಎಂಥಹ ಗೌರವಕ್ಕೆ ಅರ್ಹಳು ಎನ್ನುವುದನ್ನು ತೋರಿಸಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವರು ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ. ಅವರ ಬರವಣಿಗೆಯಿಂದಾಗಿ ಇಂದು ಕನ್ನಡ ಸಾಹಿತ್ಯ ಎನ್ನುವುದು ಶ್ರೀಮಂತಿಕೆಯ ತೊಟ್ಟಿಲಲ್ಲಿ ತೂಗುತ್ತಿದೆ. ಅದೇ ಕಾರಣಕ್ಕಾಗಿಯೇ ನಮ್ಮ ಭಾಷೆಗೆ ಎಂಟೆಂಟು ಜ್ಞಾನಪೀಠ ಪ್ರಶಸ್ತಿಗಳು ಅರಸಿ ಬಂದಿವೆ ಎಂದರು.

ಮಾತೃಭಾಷೆ ಮರಾಠಿಯನ್ನು ಬಿಟ್ಟು ಹೃದಯದ ಭಾಷೆಯಾದ ಕನ್ನಡದಲ್ಲಿ ಕವಿತೆಗಳನ್ನು ಬರೆಯುವ ಮೂಲಕ ಕನ್ನಡದ ವರಕವಿ ಎಂದು ಪ್ರಖ್ಯಾತಿ ಗಳಿಸಿದ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಮೇರು ಶಿಖರವಾಗಿ ಗುರುತಿಸಿಕೊಳ್ಳುತ್ತಾರೆ. ಅವರ ಬರವಣಿಗೆಯಲ್ಲಿ ಸ್ತ್ರೀಗೆ ನೀಡಿದಷ್ಟು ಗೌರವ ಬೇರ್ಯಾವುದಕ್ಕೂ ನೀಡಿಲ್ಲ ಎಂದು ಹೇಳಿದರು.

ತಾವು ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗುವುದಲ್ಲದೆ ತನ್ನ ಕಾವ್ಯನಾಮದಲ್ಲಿ ಅಂಬಿಕಾ ತನಯದತ್ತ ಎಂದು ಹೇಳಿಕೊಳ್ಳುವ ಮೂಲಕ ತನ್ನನ್ನು ಹೆತ್ತ ತಾಯಿ ಅಂಬಿಕೆಯನ್ನು ಕೂಡ ಅಜರಾಮರಗೊಳಿಸಿದ ಶ್ರೇಯ ಬೇಂದ್ರೆ ಅವರದು ಎಂದು ಹೇಳಿದರು.

ಸಾಹಿತಿ ರಮೇಶ ಕೋಟ್ಯಾಳ ಮಾತನಾಡಿ, ಬೇಂದ್ರೆಯವರ ಸಾಹಿತ್ಯವನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಶಬ್ದಗಳಲ್ಲಿಯೇ ಆಟವಾಡುತ್ತಿದ್ದ ಅವರ ಬರವಣಿಗೆಯ ಶೈಲಿ ಇಂದಿನ ಯುವ ಬರಹಗಾರರಿಗೆ ಅಧ್ಯಯನದ ವಸ್ತುವಾಗುತ್ತದೆ. ಎಲ್ಲ ಸಾಹಿತ್ಯನ್ನು ಓದುವುದು ಸಾಧ್ಯವಾಗದೇ ಇದ್ದರೂ ಅವರ ಒಂದೊಂದು ಕವಿತೆಯ ಒಂದೊಂದು ಸಾಲನ್ನು ದಿನಕ್ಕೊಂದರಂತೆ ಓದುತ್ತ ಸಾಗಿದರು ಸಾಹಿತ್ಯ ಕ್ಷೇತ್ರದಲ್ಲಿ ದಿನಕಿಷ್ಟು ಬೆಳೆಯುತ್ತ ಸಾಗುತ್ತೇವೆ ಎಂದು ಹೇಳಿದರು.

ಪ್ರಾಚಾರ್ಯ ಜಿ.ಎಚ್.ಮಣ್ಣೂರ ಮಾತನಾಡಿ, ಬೇಂದ್ರೆ ಎಂದರೆ ಬದುಕಿನ ಅನುಭವ. ಬದುಕಿನಲ್ಲಿನ ನೋವು ನಲಿವುಗಳಿಗೆ ಅಕ್ಷರ ರೂಪವನ್ನು ನೀಡಿ ಬರೆಯುತ್ತಿದ್ದ ಬೇಂದ್ರೆಯವರ ಬರವಣಿಗೆ ಇಂದಿಗೂ ಕೂಡ ಓದುಗನನ್ನು ಆಕರ್ಷಿಸುತ್ತವೆ. ಅದರಲ್ಲೂ ನಾಕುತಂತಿ, ಸಖಿಗೀತ ಸೇರಿದಂತೆ ಅವರ ಕವನ ಸಂಕಲನಗಳು ಎಲ್ಲ ವಯೋಮಾನದವರನ್ನು ಕೂಡ ಓದುವುದಕ್ಕೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಭಾಸ್ಕರ ಎಂ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್.ಬಿ.ಕುಂಬಾರ, ಉಪನ್ಯಾಸಕರಾದ ಮಂಜುನಾಥ ಜುನಗೊಂಡು, ಕಾಶಿನಾಥ ಕೋಣೆನ್ನವರ ಉಪಸ್ಥಿತರಿದ್ದರು.

* ಬೇಂದ್ರೆಯವರ ಸಾವಿಲ್ಲದ ಸಾಹಿತ್ಯದಲ್ಲಿ ಮೂಡಿ ಬಂದ ನೂರಾರು ಕೃತಿಗಳು ಇಂದಿಗೂ ಕೂಡ ಓದುಗನನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ

–ಸಂತೋಷ ಕುಲಕರ್ಣಿ,ಕನ್ನಡ ಉಪನ್ಯಾಸಕ, ಪಿಡಿಜೆ ಪದವಿ ಪೂರ್ವ ಕಾಲೇಜು, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT