ಮುದ್ದೇಬಿಹಾಳ: ತಾಲ್ಲೂಕಿನ ಕುಂಟೋಜಿ ಚೆನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವ ಮಾರ್ಚ್ 5, 6 ಹಾಗೂ 7ರಂದು ನಡೆಯಲಿದೆ. ಅಗತ್ಯ ಸಿದ್ಧತೆ ಪೂರ್ಣಗೊಂಡಿವೆ ಎಂದು ಚೆನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ತಾಲ್ಲೂಕಿನ ಕುಂಟೋಜಿಯ ಪಿಕೆಪಿಎಸ್ ಪಕ್ಕದಲ್ಲಿ ಹಾಕಿರುವ ಬೃಹತ್ ವೇದಿಕೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರು, ಶಾಸಕರು, ವಿವಿಧ ಮಠಗಳ ಪೂಜ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಕೆ.ಸುಗೂರಿನ ಚೆನ್ನರುದ್ರಮುನಿ ಶಿವಾಚಾರ್ಯರು, ಮೂರು ದಿನ ದಾಸೋಹ ವ್ಯವಸ್ಥೆ ಇರಲಿದೆ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮಾಜಿ ಪ್ರಧಾನ ಸಂಗನಗೌಡ ಪಾಟೀಲ್ ಮಾತನಾಡಿ, ಕಾರ್ಯಕ್ರಮದಲ್ಲಿ ಅಂದಾಜು 60 ಸಾವಿರ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗ ಸುಲ್ಲಳ್ಳಿ, ಮಾಜಿ ಅಧ್ಯಕ್ಷ ಮಲ್ಲನಗೌಡ ಬಿರಾದಾರ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಮಹಾಂತೇಶ ಬೂದಿಹಾಳಮಠ ಇದ್ದರು.
ಮಾರ್ಚ್ 5ರಂದು ಬೆಳಿಗ್ಗೆ ಪಂಚಾಚಾರ್ಯರ ಧ್ವಜಾರೋಹಣ, ಹಿರೇಮಠದ ಗೋಪುರಕ್ಕೆ ಕಳಸಾರೋಹಣ, ಸಂಜೆ ಧರ್ಮ ಸಮನ್ವಯ ಸಮಾರಂಭ ಹಾಗೂ ಶರಣ ಬಸವೇಶ್ವರ ಪುರಾಣ ಮಂಗಲೋತ್ಸವ ನಡೆಯಲಿದೆ. ವಿವಿಧ ಮಠಾಧೀಶರು ಭಾಗವಹಿಸಲಿದ್ದು, ಉಪನ್ಯಾಸ, ಭರತನಾಟ್ಯ ಕಾರ್ಯಕ್ರಮ ನಡೆಯಲಿವೆ.
ನಾಟಕೋತ್ಸವ: ಸಾಣೇಹಳ್ಳಿ ಶಿವಕುಮಾರ ಕಲಾ ನಾಟಕ ಸಂಘದಿಂದ ಮಾರ್ಚ್ 5 ರಂದು ‘ತಾಳಿಯ ತಕರಾರು’, 7ರಂದು ‘ಕಲ್ಯಾಣದ ಬಾಗಿಲು’ ನಾಟಕ ಪ್ರದರ್ಶನ ರಾತ್ರಿ 10.30ಕ್ಕೆ ನಡೆಯಲಿವೆ.
ಮಾರ್ಚ್ 6 ರಂದು ಅಯ್ಯಾಚಾರ ಶಿವದೀಕ್ಷೆ, ಸಂಜೆ ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಜಾಗೃತಿ ಸಮಾರಂಭ ನಡೆಯಲಿದೆ. ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಧ್ಯಕ್ಷತೆ ವಹಿಸುವರು. ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸುವರು, ಸ್ವಾಮೀಜಿಗಳು ಉಪಸ್ಥಿತರಿರುವರು.
7 ರಂದು ಪಟ್ಟಾಧಿಕಾರದ ವಿಧಿವಿಧಾನಗಳು ಜರುಗಲಿದ್ದು, ಚೆನ್ನವೀರ ದೇವರಿಗೆ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ಎಂಬ ನಾಮಕರಣ ಅನುಗ್ರಹಿಸುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಗುರುಪಟ್ಟಾಧಿಕಾರ ಮಹೋತ್ಸವ ಹಾಗೂ ಧರ್ಮ ಸಂದೇಶ ಕಾರ್ಯಕ್ರಮ, ಸಂಜೆ ಸಂಗೀತ ಸಂಜೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.