ವಿಜಯಪುರ: ‘ಆರತಿಗೊಂದು ಕೀರ್ತಿಗೊಂದು ಎಂದು ಎರಡೇ ಮಕ್ಕಳನ್ನು ಹೇರುತ್ತಿರುವುದರಿಂದ ಭಾರತೀಯತೆ ನಾಶವಾಗುತ್ತಿದ್ದು, ದೇಶ ಹಾಳಾಗುತ್ತಿದೆ. ದೇಶ ಉಳಿಸಬೇಕಾದರೆ, 4 ಮಕ್ಕಳಿಗೆ ಜನ್ಮ ನೀಡುವುದು ಅನಿವಾರ್ಯ‘ ಎಂದು ಶಿರಶ್ಯಾಡದ ಅಭಿನವ ಮುರುಗೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಿಜಯಪುರ ತಾಲ್ಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ತ್ಯಾರ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಸಾಮೂಹಿಕ ವಿವಾಹ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ 43 ನವ ಜೋಡಿಗಳಿಗೆ ಆರ್ಶೀವಚನ ನೀಡಿ ಮಾತನಾಡಿದ ಅವರು, ದೇಶಕ್ಕೊಬ್ಬ, ಪರಿವಾರಕ್ಕೊಬ್ಬ, ಧರ್ಮಕ್ಕೊಬ್ಬ ಹಾಗೂ ಸಮಾಜಕ್ಕೊಬ್ಬ ಹೀಗೆ ಪ್ರತಿ ಮಾತೆಯರು ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು ಎಂದರು.
‘ದೇಶದ ಭದ್ರತೆ ಹಾಗೂ ಸಮಾಜದ ಸುಧಾರಣೆ ಅತೀ ಮುಖ್ಯ ವಿಷಯಗಳು. ಅವುಗಳ ಜೊತೆಗೆ ಧರ್ಮದ ಕಾರ್ಯವೂ ನಡೆಯಬೇಕು. ನಾವೆಲ್ಲ ಸದಾಶಿವನ ಅಂಗಳದಲ್ಲಿ ಕುಳಿತರೆ ಸ್ವರ್ಗದಲ್ಲಿ ಕುಳಿತಂತೆ, ಇಲ್ಲಿ ಶಿವನಾಮ ಸ್ಮರಣೆ ಮಾಡಿದರೆ ಜನ್ಮ ಪಾವನವಾಗುತ್ತದೆ ಎಂದರು.
ನವ ಜೀವನಕ್ಕೆ ಕಾಲಿಟ್ಟಿರುವ ಜೋಡಿಗಳು ಸನಾತನ ಭಾರತದ ಪರಂಪರೆ ತಿಳಿದುಕೊಳ್ಳಬೇಕು. ಬೇರೆ ದೇಶಗಳಲ್ಲಿ ಎರಡು ದೇಹಗಳಿಗೆ ಮದುವೆಯಾದರೆ, ಭಾರತದಲ್ಲಿ ಎರಡು ಮನಸ್ಸು, ಎರಡು ಕುಟುಂಬ, ಎರಡು ಗ್ರಾಮಗಳಿಗೆ ಮದುವೆಯ ಬಂಧ ಏರ್ಪಡುತ್ತದೆ. ಒಂದು ಜೀವಕ್ಕೆ ಜೀವನ ಕೊಡುವ ಶಕ್ತಿ ಶಿವ ಪರಮಾತ್ಮನಿಗೆ ಬಿಟ್ಟರೆ ಗ್ರಹಸ್ತರಿಗೆ ಮಾತ್ರ ಇದೆ. ಅದನ್ನು ಅರ್ಥ ಮಾಡಿಕೊಂಡು ಹೆಚ್ಚಿಗೆ ಮಕ್ಕಳನ್ನು ಹೆರಬೇಕು‘ ಎಂದರು.
ಕತಕನಹಳ್ಳಿ ಶಿವಯ್ಯ ಸ್ವಾಮಿಜಿಗಳು ಮಾತನಾಡಿ, ‘ಸತಿಪತಿಗಳ ಜಗಳ ಶ್ರೀಗಂಧ ತಿಕ್ಕಿದಂತೆ ಸುವಾಸನೆಯುಕ್ತವಾಗಿರಬೇಕೆ ಹೊರತು ಜಾಲಿ ಕಟ್ಟಿಗೆ ತಿಕ್ಕಿದಂತಿರಬಾರದು. ದಂಪತಿ ಎನ್ನುವ ಅಕ್ಷರದಲ್ಲಿ ಬಹಳಷ್ಟು ಮಹತ್ವ ಇದೆ. ದಾರಣ, ಸತಿಯಲ್ಲಿ ಇತಿ, ಮಿತಿ, ಸಮ್ಮತಿ ಇಟ್ಟುಕೊಳ್ಳಬೇಕು. ಪತಿಯಲ್ಲಿ ಸಹನೆ ಇರಬೇಕು ಅವರನ್ನು ದಂಪತಿ ಎನ್ನುತ್ತಾರೆ‘ ಎಂದರು.
ಮಠದ ಮಹಾದೇವಿ ಅಮ್ಮನವರು, ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉದ್ಯಮಿ ಬಾಬುಗೌಡ ಬಿರಾದಾರ, ರಾಜು ಗುಡ್ಡೊಡಗಿ, ಗೋಪಾಲ ಘಟಕಾಂಬಳೆ, ಸಿದ್ದುಮುತ್ಯಾ, ಗೀರಿಧರ ರಾಜು, ಸುಭಾಶ ಇಂಗಳೇಶ್ವರ, ಪ್ರಕಾಶಗೌಡ ಪಾಟೀಲ ಹಾಲಳ್ಳಿ, ವಿಜಯಕುಮಾರ ಕುವಳ್ಳಿ, ಕಿರಣ ಹೆರಲಗಿ, ಅಶೋಕ ಪಟ್ಟಣಶೆಟ್ಟಿ ಮತ್ತಿತರಿದ್ದರು.
‘ರಾವಣನಂಗ ಕೀಚಕನಂಗ ತಿರಗಬ್ಯಾಡ್ರಿ’
‘ಜೋಡತ್ತಿನ ನಾಕ ಸರ್ತಿಗಾಡಿ ಮುಂದ ಹೊಂಟಾವ. ತ್ಯಾಗಿ ಯೋಗಿ ಭೋಗಿ ರೋಗಿ ಸರ್ತಿ ಗಾಡ್ಯಾಗ ಯಾವ ಹೊಡಿತೀರಿ ನೋಡ್ರಿ ವಿಜಯಪುರ ತಾಲ್ಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ತ್ಯಾರ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಶ್ರೀಮಠದ ಪೀಠಾಧೀಶ ಶಿವಯ್ಯ ಮಹಾಸ್ವಾಮಿ ನುಡಿದ ಗುರು ಕರುಣೆಯ ಅಂತ:ಕರಣದ ನುಡಿಗಳಿವು. ‘ದೈತ್ಯ ಕಂಪನಿ ಗಂಟು ಬಿದ್ದೈತಿ. ದೈತ್ಯ ಕಂಪನಿ ದೈತ್ಯರ ರಾಜಕೀಯ ಆಳಬೇಕು ಎಂದು ಗಂಟು ಬಿದೈತಿ ತಮ್ಮ ಕಡೆಯಿಂದ ಆಗದೇ ಹೋದರೆ ಮಿಕ್ಸ್ ಬಾಜಿ ಮಾಡಲು ಗಂಟು ಬಿದೈತಿ. ನಮ್ಮಿಂದ ಆಗಲಿಂದ್ರ ಕಡೀಕ್ ಮಿಕ್ಸ್ ಬಾಜಿ ಮಾಡಬೇಕಂತ ಗಂಟ ಬಿದೈತಿ. ಹೆಂಗ ಮಾಡ್ತೀರಿ ನೋಡ್ರಿ’ ಎಂದು ಸೂಚಿಸಿದರು. ‘ಈ ವರ್ಷ ಬಹಳ ವಿಶೇಷ ವರ್ಷ. ಕ್ರೋಧಿನಾಮ ಸಂವತ್ಸರ. ಹೆಸರಿನ್ಯಾಗ ಕ್ರೋಧಿ ಐತಿ. ಕ್ರೋಧ ಇಟಗೊಂಡವ ಸಿಟ್ಟು ಬಳಸಾಂವ ಸಿಟ್ಟನ್ನು ಚಲಾವಣೆಯಲ್ಲಿ ತರಾವ್. ಸಿಟ್ಟನ್ ಸ್ವೀಕಾರ ಮಾಡಿ ಮಸ್ತಕದೊಳಗ ಇಟಗೊಂಡಾವ ಕ್ರೋದಿ. ಕ್ರೋಧಿನಾಮ ಸಂವತ್ಸರ ಐತೆಂತ ಸಿಟ್ ತೆಲ್ಯಾಗ ಇಟಗೊಂಡ ತಿರಗಬ್ಯಾಡ್ರಿ ರಾವಣನಂಗ ಕೀಚಕನಂಗ ತಿರಗಬ್ಯಾಡ್ರಿ’ ಎಂದು ಸಂದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.