ವಿಜಯಪುರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರದ ವಿರುದ್ಧ ಮತ್ತು ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ಮಾತನಾಡಿ, ಬೆಲೆ ಏರಿಕೆ ಪರಿಣಾಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಒಂದೇ ಆಗಿರುವುದು ವಿಪರ್ಯಾಸ, ಜನ ಸಾಮಾನ್ಯರ ಪರಿಸ್ಥಿತಿ ಶೋಚನೀಯವಾಗಿದೆ. ಪ್ರಧಾನಿ ಮೋದಿ ಅವರ ಆರ್ಥಿಕ, ವಿದೇಶಾಂಗ ನೀತಿ ಹದಗೆಟ್ಟುಹೋಗಿದೆ ಎಂದು ಆರೋಪಿಸಿದರು.
ತೈಲ ಬೆಲೆ ಏರಿಕೆ ತಡೆಯಬೇಕು, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಜನ ವಿರೋಧಿ ಕಾರ್ಯಕ್ರಮಗಳು ಜಾರಿಗೆ ತರುತ್ತಿದ್ದು, ಇಲ್ಲಿಯವರೆಗೆ ಇವರು ನೀಡಿದಂತಹ ಯಾವುದೇ ಆಶ್ವಾಸನೆ ಜನ ಸಾಮಾನ್ಯರಿಗೆ ತಲುಪಿಲ್ಲ ಸುಳ್ಳಿನ ಕಂತೆಗಳನ್ನು ಕಟ್ಟಿ ಜನರನ್ನು ಮರಳು ಮಾಡುತ್ತಿರುವ ಈ ಸರ್ಕಾರ ಅಧಿಕಾರದಲ್ಲಿರಲು ಯೋಗ್ಯವಾಗಿಲ್ಲ ಎಂದು ಹೇಳಿದರು.
ಈ ಸರ್ಕಾರ ಸಂವಿಧಾನದ ಮೇಲೆ ನಂಬಿಕೆ ಇಡದೇ ಆರ್.ಎಸ್.ಎಸ್ ಅಣತಿಯಂತೆ ನಡೆಯುತ್ತಿದೆ ದೇಶ ಕೊರೊನಾದಿಂದ ನಲುಗಿ ಹೋಗಿದ್ದು, ಈ ರೋಗ ತಡೆಗಟ್ಟುವಲ್ಲಿಯೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಯಾವುದೇ ಮುಂದಾಲೋಚನೆ ಇಲ್ಲದೆ ಲಾಕ್ ಡೌನ್ ವಿಧಿಸಿ ಜನರಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಪದೇ-ಪದೇ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಸಿ ಜನ ಸಾಮಾನ್ಯರ ಮೇಲೆ ಹೊರೆಯಾಗಿಸುತ್ತಿದ್ದಾರೆ ಎಂದರು.
ಮುಖಂಡರಾದ ವೈಜನಾಥ ಕರ್ಪೂರ ಮಠ, ಅಬ್ದುಲ್ ಹಮೀದ್ ಮುಶ್ರಫ್, ವಿದ್ಯಾರಾಣಿ ತುಂಗಳ, ವಿಠಲ್ ಕೋಳೂರ, ಎಸ್.ಎಂ.ಪಾಟೀಲ ಗಣಿಯಾರ, ಮುಹಮ್ಮದ್ ಪಾಟೀಲ ಗಣಿಯಾರ, ಚಾಂದಸಾಬ ಗಡಗಲಾವ, ಕಾಂತಾ ನಾಯಕ, ಸಂದೀಪ್ ಬೆಳಗಲಿ, ಸುನೀತಾ ಐಹೊಳೆ, ಜಮೀರ್ ಅಹ್ಮದ್ ಬಕ್ಷಿ, ಮಹ್ಮದ್ರಫೀಕ್ ಟಪಾಲ, ಅಬ್ದುಲ್ಖಾದರ್ ಖಾದಿಂ, ಜಮೀರ್ಅಹ್ಮದ್ ಬಾಗಲಕೋಟ, ಸಾಹೇಬಗೌಡ ಬಿರಾದಾರ, ಇರ್ಫಾನ್ ಶೇಖ್, ಆರತಿ ಶಹಾಪೂರ, ವಿಠ್ಠಲ ಕೋಳೂರ, ಸುರೇಶ ಘೋಣಸಗಿ, ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ಐ.ಎಂ.ಇಂಡೀಕರ, ವಿಜಯಕುಮಾರ ಘಾಟಗೆ, ಲಕ್ಷ್ಮೀ ದೇಸಾಯಿ, ಜಯಶ್ರೀ ಭಾರತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.