ಕೊಲ್ಹಾರ(ವಿಜಯಪುರ): ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರ ರೋಣಿಹಾಳ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನುಳಿದ ಆರು ಮಂದಿ ಹಾಗೂ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರೆಲ್ಲರೂ ಕಬಡ್ಡಿ ಕ್ರೀಡಾಪಟುಗಳಾಗಿದ್ದು ಮಹಾರಾಷ್ಟ್ರದ ಪುಣೆಯ ಕುಳಂ ಗ್ರಾಮದವರು ಎನ್ನಲಾಗಿದೆ. ಘಟನೆಯಲ್ಲಿ ಸೋಹೆಲ್ ಇಸ್ಮಾಯಿಲ್ ಸೈಯದ್ (20) ಹಾಗೂ ಮಹಾದೇವ ಬಾಪೂ ಅವಟಿ (23) ಮೃತಪಟ್ಟಿದ್ದಾರೆ.
ಇವರು ಬಾಗಲಕೋಟೆಯ ಬೀಳಗಿ ಸಮೀಪ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸೊಲ್ಲಾಪುರದಿಂದ ಬರುತ್ತಿದ್ದಾಗ ಈ ಅವಘಡ ನಡೆದಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.