ತಾಳಿಕೋಟೆ: ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭೆಗಳಿಗೆ ನಿರೀಕ್ಷಿತ ಬೆಂಬಲ ಬೆಂಗಳೂರು ಸಿನಿಮಾದವರಾಗಲಿ, ಚಾನೆಲ್ ನವರಾಗಲಿ ನೀಡುವುದಿಲ್ಲ. ತಮ್ಮ ಟಿಆರ್ಪಿ ಬೆಳೆಸಿಕೊಳ್ಳಲು ನಾವು ಬಳಕೆಯಾಗುತ್ತೇವೆ ಎಂದು ಜನಪದ ಗಾಯಕ ಗುರುರಾಜ ಹೊಸಪೇಟಿ ಹೇಳಿದರು.
ಪಟ್ಟಣದ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಅಂಗವಾಗಿ ಎರಡನೆಯ ದಿನವಾದ ಶನಿವಾರ ರಾಜವಾಡೆಯ ಆವರಣದಲ್ಲಿ ಹಾಕಿದ್ದ ಭವ್ಯ ವೇದಿಕೆಯಲ್ಲಿ ಜಾನಪದ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಉತ್ತರ ಕರ್ನಾಟಕದ ಕಲಾಕಾರರು ಬೆಂಗಳೂರಿಗೆ ಹೋಗಿಯೂ ಉಪಯೋಗ ಇಲ್ಲ. ಆದ್ದರಿಂದ ಉತ್ತರ ಕರ್ನಾಟಕದವರೇ ಈ ದಿಸೆಯಲ್ಲಿ ಚಾನಲ್ ಪ್ರಾರಂಭಿಸಬೇಕು. ನನ್ನ ಮಗ, ಇಬ್ಬರು ಹೆಣ್ಣುಮಕ್ಕಳು, ಅಳಿಯ ಎಲ್ಲರೂ ಸೇರಿ ನಮ್ಮದೇ ಹಾಡಿನ ತಂಡ ಕಟ್ಟಿದ್ದೇವೆ. ನನಗೀಗ 73 ವಯಸ್ಸಾಗಿದ್ದರೂ ಮುಪ್ಪು ಬಂದಿಲ್ಲ. ಇದಕ್ಕೆ ನಿಮ್ಮ ಹರ್ಷದ ಚಪ್ಪಾಳೆ ಪ್ರೋತ್ಸಾಹದ ಮಾತುಗಳೇ ಕಾರಣ ಎಂದರು.
80ಕ್ಕೂ ಅಧಿಕ ಚಿತ್ರಗಳಿಗೆ ಹಾಡು ಹಾಡಿರುವೆ. ಆದರೆ, ನಾನು ನಟ ಅಥವಾ ಗಾಯಕ ಎಂದುಕೊಳ್ಳಬಯಸದೇ ಒಬ್ಬ ಜಾನಪದ ಗಾಯಕನಾಗಿಯೇ ಉಳಿದುಕೊಳ್ಳ ಬಯಸುವೆ ಎಂದರು.
ಜಾತ್ರಾ ಮಹೋತ್ಸವಕ್ಕೆ ನೆರವಾದ ದಾನಿಗಳನ್ನು ಗೌರವಿಸಲಾಯಿತು. ಜಾತ್ರಾ ಸಮಿತಿಯವರು ಹಾಡುಗಾರರಿಗೆ ಮಳೆಯ ತೊಂದರೆ ಬರದಂತೆ ತಕ್ಷಣವೇ ತಾಡಪತ್ರಿಯನ್ನು ಅವರ ತಲೆಯ ಮೇಲೆ ಹಿಡಿದು ರಕ್ಷಣೆ ನೀಡಿ ಹಾಡುಗಾರಿಕೆಗೆ ಅನುಕೂಲ ಮಾಡಿಕೊಟ್ಟರು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಗೀಗಿ ಪದಗಳ ಜುಗಲ್ ಬಂಧಿ ಸೇರಿದ್ದ ಜನರನ್ನು ರಂಜಿಸಿದವು. ರಾತ್ರಿ ಜಗಜ್ಯೋತಿ ಬಸವೇಶ್ವರ ನಾಟ್ಯ ಸಂಘ, ಬ.ಬಾಗೇವಾಡಿ ಇವರಿಂದ ‘ಜಮೀನ್ದಾರ ಸೊಸೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.