ವಿಜಯಪುರ: ಕಾಲುವೆ ಮೂಲಕತಿಕೋಟಾ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ತಿಕೋಟಾದಲ್ಲಿ ಸಾರ್ವಜನಿಕರು ನಡೆಸಿದ ಹೋರಾಟಕ್ಕೆ ಸ್ಪಂದಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಸೋಮವಾರದಿಂದ ಕೆರೆಗೆ ನೀರು ಹರಿಸಲು ಆರಂಭಿಸಿದ್ದಾರೆ.
ತಿಕೋಟಾ ಜಾಕವೆಲ್ಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆರೆಗೆ ನೀರು ಬಿಡಿಸುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದರು.
ತಿಕೋಟಾ ಕೆರೆಗೆ ನೀರು ಹರಿಸುವುದರಿಂದ ಸುಮಾರು 1100 ಮನೆಗಳಿಗೆ ನೀರು ನುಗ್ಗುತ್ತಿರುವುದರ ಕುರಿತು ಅಧಿಕಾರಿಗಳು ಪಾಟೀಲ ಅವರ ಗಮನಕ್ಕೆ ತಂದರು.
ಬೇಸಿಗೆಯಲ್ಲಿ ತಿಕೋಟಾ ಜನತೆಗೆ ನೀರಿನ ತೊಂದರೆಯಾಗದಂತೆ, ಕೆರೆಯ ಭರ್ತಿಗೆ ಇನ್ನು ಒಂದು ಅಡಿ ಕಡಿಮೆ ಇರುವರೆಗೆ ಮಾತ್ರ ನೀರು ಹರಿಸುವಂತೆ ಮತ್ತು ಕೆಳಭಾಗದ ಮನೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮುಖಂಡರಾದ ತಮ್ಮಣ್ಣ ಹಂಗರಗಿ, ರಾಮು ದೇಸಾಯಿ, ಜಗದೀಶಗೌಡ ಪಾಟೀಲ, ಬಸಯ್ಯ ವಿಭೂತಿ, ಭೀಮಸೇನ ನಾಟಿಕಾರ, ಮಧುಕರ ಜಾಧವ ಟಕ್ಕಳಕಿ ಇದ್ದರು.
ಹೋರಾಟದ ಎಚ್ಚರಿಕೆ:
ಕೆರೆಗೆ ನೀರು ಬರುವ ಕಾಲುವೆಗೆ ಅಡ್ಡ ಗೋಡೆ ಕಟ್ಟಿದನ್ನು ತೆಗೆಯಬೇಕು, ನೀರು ಹರಿಸದೇ ಇದ್ದಲ್ಲಿ ಕೆರೆಗೆ ನೀರು ಬಿಡಿಸುವ ಹೋರಾಟ ಸಮಿತಿ ಜೊತೆಗೂಡಿ ಅಮರಣ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ್ ಎಚ್ಚರಿಕೆ ನೀಡಿದ್ದರು.
ಎಸಿ ಭೇಟಿ: ಹೋರಾಟ ಸ್ಥಳಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಅವರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಕಾಲುವೆ ಮೂಲಕ ನೀರು ಹರಿಸುವ ಭರವಸೆ ನೀಡಿದರು.
ಕೆರೆಗೆ ನೀರು ಬಿಡಿಸುವ ಹೋರಾಟ ಸಮಿತಿ ಹಾಗೂ ಜನಪ್ರತಿನಿಧಿಗಳ ಹೋರಾಟದಿಂದ ಎಚ್ಚೆತ್ತ ಅಧಿಕಾರಿಗಳು ನೀರು ಹರಿಸುವ ಮೂಲಕ ಹೋರಾಟಕ್ಕೆ ಸ್ಪಂದಿಸಿದ್ದಾರೆ.