ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ | ವಿಲೇವಾರಿ ಆಗದ ತ್ಯಾಜ್ಯ 

ಶಂಕರ ಈ.ಹೆಬ್ಬಾಳ
Published 20 ಮೇ 2024, 5:33 IST
Last Updated 20 ಮೇ 2024, 5:33 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಕಳೆದ ಎರಡು ತಿಂಗಳ ಹಿಂದಷ್ಟೇ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದ ಹುಡ್ಕೋಗೆ ತೆರಳುವ ರಸ್ತೆ ಪಕ್ಕದಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿದ್ದ ಅಧಿಕಾರಿಗಳು ಅದರ ತ್ಯಾಜ್ಯ ವಿಲೇವಾರಿ ಮಾಡಲು ಆಸಕ್ತಿ ತೋರಿಸದ ಪರಿಣಾಮ ಜನರು ನೆರಳಿನ ಆಶ್ರಯಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಹಶೀಲ್ದಾರ್ ಕಚೇರಿಗೆ ನಿತ್ಯವೂ ನೂರಾರು ಜನರು ತಮ್ಮ ಕೆಲಸಗಳಿಗೆ ಬರುತ್ತಾರೆ. ಅವರಿಗೆ ವ್ಯವಸ್ಥಿತವಾಗಿ ಒಂದೆಡೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿಲ್ಲ. ಸಿಕ್ಕಸಿಕ್ಕಲ್ಲಿ ಬೈಕ್, ಕಾರುಗಳನ್ನು ಪಾರ್ಕಿಂಗ್ ಮಾಡಿ ಕಚೇರಿಯೊಳಗೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಾರೆ.

ತಹಶೀಲ್ದಾರ್ ಕಚೇರಿಗೆ ತೆರಳುವ ಆರಂಭದ ದ್ವಾರದ ಅಕ್ಕಪಕ್ಕದಲ್ಲಿದ್ದ ಡಬ್ಬಾ ಅಂಗಡಿಗಳನ್ನು ಹಿಂದಿನ ತಹಶೀಲ್ದಾರ್ ಬಲರಾಮ ಕಟ್ಟೀಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿತ್ತು. ಆಗ ಝರಾಕ್ಸ್, ಆನ್‌ಲೈನ್ ಸೆಂಟರ್, ಪಾನ್‌ಶಾಪ್, ಹೊಟೇಲ್‌ಗಳನ್ನು ಹಾಕಿಕೊಂಡಿದ್ದರು. ಅಲ್ಲದೇ, ಅನಧಿಕೃತವಾಗಿ ಕಟ್ಟೆಗಳನ್ನು ಕಟ್ಟಿಕೊಂಡಿದ್ದರು. ಇದನ್ನೆಲ್ಲ ಅಧಿಕಾರಿಗಳು ಎರಡು ತಿಂಗಳ ಹಿಂದೆಯೇ ತೆರವುಗೊಳಿಸಿದ್ದಾರೆ. ಆದರೆ, ಅಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿಲ್ಲ.ಇದರಿಂದಾಗಿ ಹಳ್ಳಿಗಳಿಂದ ಬಂದ ಜನರು ದಣಿವಾರಿಸಿಕೊಳ್ಳಲು, ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ನೆರಳಿನ ಆಶ್ರಯ ಹುಡುಕಾಡಬೇಕಾಗಿದೆ.

ಗಬ್ಬು ನಾತ ಬೀರುವ ಚರಂಡಿ:

ಹುಡ್ಕೋದ ಎಲ್ಲ ಮನೆಗಳ ಚರಂಡಿ ನೀರು ಒಂದೆಡೆ ಶೇಖರಣೆಗೊಂಡು ಚರಂಡಿ ಮೂಲಕ ಹರಿಯಬಿಡಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಚರಂಡಿಯ ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಇದೆ. ಇದೇ ರಸ್ತೆಯಲ್ಲಿ ನ್ಯಾಯಾಲಯ ಇದೆ. ಪುರಸಭೆಯವರು ಈ ಸಮಸ್ಯೆಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸುವ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಗಿಡಗಳ ಕೆಳಗಡೆ ಇದ್ದ ಕಲ್ಲು ಮಣ್ಣು ಚರಂಡಿಯೊಳಗೆ ಬಿದ್ದಿದೆ
ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಗಿಡಗಳ ಕೆಳಗಡೆ ಇದ್ದ ಕಲ್ಲು ಮಣ್ಣು ಚರಂಡಿಯೊಳಗೆ ಬಿದ್ದಿದೆ
ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಗಿಡಗಳ ಕೆಳಗಡೆ ಇರುವ ತ್ಯಾಜ್ಯವನ್ನು ವಿಲೇವಾರಿ ಮಾಡಿ ಅಲ್ಲಿ ಪುರಸಭೆಯಿಂದ ಸಾರ್ವಜನಿಕರು ಕೂರಲು ಆಸನ ಅಳವಡಿಸಿದರೆ ಜನರಿಗೆ ಅನುಕೂಲವಾಗುತ್ತದೆ 
ಜಿ.ವೈ.ದಫೇದಾರ ಪ್ರಧಾನ ಕಾರ್ಯದರ್ಶಿ ಜನಸೇವಾ ಸಂಸ್ಥೆ
ಲೋಕಸಭಾ ಚುನಾವಣೆಯ ಕೆಲಸದಲ್ಲಿ ತೊಡಗಿದ್ದರಿಂದ ಕಚೇರಿ ಆವರಣದಲ್ಲಿದ್ದ ಕಲ್ಲು ಮಣ್ಣು ತೆರವುಗೊಳಿಸುವ ಕಾರ್ಯ ಆಗಿಲ್ಲ. ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟು ಬೇಗ ಅಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿಸಲು ಕ್ರಮ ಜರುಗಿಸುತ್ತೇವೆ
ಬಸವರಾಜ ನಾಗರಾಳ ತಹಶೀಲ್ದಾರ್
ಸಾರ್ವಜನಿಕ ಹಿತದೃಷ್ಟಿಯಿಂದ ಇರುವ ಯಾವುದೇ ಕೆಲಸವನ್ನು ನಾವು ಕೈಗೊಳ್ಳುತ್ತೇವೆ. ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ತ್ಯಾಜ್ಯವನ್ನು ನಾನು ಗಮನಿಸಿಲ್ಲ. ಸಿಬ್ಬಂದಿ ಕಳುಹಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು
ಬಸವರಾಜ ಬಳಗಾನೂರ ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT