ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಶ್ರೀಶಾರದಾ ಆಶ್ರಮ, ವಿಜಯಪುರ
ಈ ಜಗತ್ತಿನಲ್ಲಿ ಮನುಷ್ಯ ಉಳಿದೆಲ್ಲ ಜೀವಿಗಳಿಗಿಂತ ದೈಹಿಕವಾಗಿ ಅಶಕ್ತ. ಆದರೆ, ನಿಸರ್ಗ ಮನುಷ್ಯನ ಬಗ್ಗೆ ಕೂಡ ಕರುಣೆ ಹಾಗೂ ರಿಯಾಯಿತಿಯನ್ನು ತೋರಿದೆ. ಮನುಷ್ಯನಿಗೆ ದೇವರು ವಿಚಾರ ಶಕ್ತಿ ಎಂಬ ಮಹಾನ್ ಕೊಡುಗೆಯನ್ನು ನೀಡಿದ್ದಾನೆ. ಮನುಷ್ಯ ತನಗೆ ಬೇಕಾದ ಪರಿಸರ ವಾತಾವರಣವನ್ನು ನಿರ್ಮಿಸಿಕೊಳ್ಳಬಲ್ಲ. ಅದೇ ಅನ್ಯ ಜೀವಿಗಳು ತಮ್ಮ ಪರಿಸರ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ದುರ್ದೈವವೆಂದರೆ ಕೆಲವೇ ಕೆಲವು ಜನರು ಮಾತ್ರ ತಮಗೆ ಅನಾಯಾಸವಾಗಿ ಬಂದಿರುವ ಈ ಮಹಾನ್ ಕೊಡುಗೆ ವಿಚಾರ ಶಕ್ತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವುದು.
ವೈಫಲ್ಯಗಳಲ್ಲಿ ಎರಡು ವಿಧಗಳು. ಆಲೋಚಿಸದೆ ಕೆಲಸ ಮಾಡಿದವರು ಹಾಗೂ ಆಲೋಚಿಸಿ ಏನೂ ಮಾಡದೆ ಇದ್ದವರು. ನಮಗಿರುವ ಚಿಂತನ ಸಾಮರ್ಥ್ಯವನ್ನು ಬಳಸಿಕೊಳ್ಳದೆ ಜೀವಿಸುವುದು, ಗುರಿ ನೋಡದೆ ಗುಂಡು ಹಾರಿಸಿದಂತೆ. ಜೀವನವೆನ್ನುವುದು ಹೋಟೆಲ್ ಇದ್ದ ಹಾಗೆ. ನಾವು ನಮ್ಮ ತಾಟು ತೆಗೆದುಕೊಂಡು ನಮಗೆ ಬೇಕಾಗಿದ್ದನ್ನು ಬಡಿಸಿಕೊಂಡು ಹೋಗಿ ಬಿಲ್ ಕಟ್ಟುವುದು. ಬೆಲೆ ಕೊಡಲು ಸಿದ್ಧರಿರುವವರಿಗೆ ನಮಗೆ ಬೇಕಾದುದೆಲ್ಲವೂ ದೊರಕುವುದು. ನೀವು ಕುಳಿತಲ್ಲಿಯೇ ನಿಮಗೆ ಬೇಕಾಗಿದ್ದನ್ನು ಬಡಿಸುವವರು ಬರುತ್ತಾರೆಂದು ಕಾಯುತ್ತಾ ಕುಳಿತರೆ, ನೀವು ಕಾಯುತ್ತಲೇ ಇರಬೇಕು.
ಪ್ರತಿ ಆಯ್ಕೆಗೂ ಒಂದು ಪರಿಣಾಮವಿರುತ್ತದೆ. ನಾವು ಏನನ್ನೇ ಆಗಲಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಆದರೆ, ಆಯ್ಕೆ ಮಾಡಿಕೊಂಡ ನಂತರ ಅದು ನಮ್ಮನ್ನು ನಿಯಂತ್ರಿಸತೊಡಗುತ್ತದೆ. ಅಸಮಾನರಾಗಲು ನಮಗೆ ಸಮಾನ ಅವಕಾಶಗಳಿವೆ, ಆಯ್ಕೆ ಮಾತ್ರ ನಮ್ಮದು. ಮಣ್ಣನ್ನು ತನಗೆ ಬೇಕಾದ ರೂಪದ ಮಡಕೆಯಾಗಿ ರೂಪಿಸುವ ಕುಂಬಾರನಿಗೆ ಜೀವನವನ್ನು ಹೋಲಿಸಬಹುದು. ಹಾಗೆಯೇ ನಮ್ಮ ಜೀವನವನ್ನು ನಮಗೆ ಬೇಕಾದಂತೆ ನಾವು ರೂಪಿಸಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.