ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ದಟ್ಟ ಮಂಜು ಆವರಿಸಿತ್ತು. ಜೊತೆಗೆ ಶೀತಗಾಳಿಯೂ ದಿನಪೂರ್ತಿ ಬೀಸಿತು.
‘ಬಿಸಿಲ ನಗರಿ’ ವಿಜಯಪುರವು ಮಂಜು ಕವಿದ ಮಡಕೇರಿಯಂತೆ ಕಂಡುಬಂದಿತು.
ಬೆಳಿಗ್ಗೆ 10.30ರ ವರೆಗೂ ಸೂರ್ಯನ ದರ್ಶನವಿರಲಿಲ್ಲ. ಶೀತ ಗಾಳಿ, ಮೈ ಕೊರೆಯುವ ಚಳಿಯ ಕಾರಣಕ್ಕೆ ಜನ ಮನೆಯಿಂದ ಹೊರಬರಲು ಅಂಜುವಂತಾಗಿತ್ತು.
ತಾಪಮಾನ 8 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿತ್ತು, ಚಳಿಯಿಂದ ಪಾರಾಗಲುಜನ ಹೆಚ್ಚೆಚ್ಚು ಟೀ, ಕಾಫಿ, ಶ್ವೆಟರ್, ಟೊಪ್ಪಿ ಮೊರೆ ಹೋಗಿದ್ದರು. ಜನರು ಅಲ್ಲಲ್ಲಿ ಕಟ್ಟಿಗೆ, ಕಾಗದ, ಒಣ ಎಲೆಗಳನ್ನು ರಾಶಿ ಮಾಡಿ ಬೆಂಕಿ ಹಚ್ಚಿ ಮೈಕಾಯಿಸಿಕೊಳ್ಳುತ್ತಿರುವ ದೃಶ್ಯ ಕಂಡಬಂದಿತು.
ಬೆಳ್ಳಂಬೆಳಿಗ್ಗೆ ಹಾಲು, ದಿನಪತ್ರಿಕೆ ವಿತರಕರು ಚಳಿಯಲ್ಲೇ ಕಷ್ಟಪಟ್ಟು ಮನೆಮನೆಗೆ ತಲುಪಿಸಿದರು. ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಲಾಗದೇ ವಯಸ್ಸಾದವರು, ಮಹಿಳೆಯರು ಮನೆಯಲ್ಲೇ ಉಳಿದಿದ್ದರು.
ದಟ್ಟವಾದ ಮಂಜು ವಾತಾವರಣವನ್ನು ಆವರಿಸಿದ್ದರಿಂದ ವಾಹನ ಸವಾರರಿಗೆ ರಸ್ತೆ ಕಾಣದೆ ಹೆಡ್ ಲೈಟ್ ಹಾಕಿಕೊಂಡು ವಾಹನ ಓಡಿಸುತ್ತಿದ್ದ ದೃಶ್ಯ ಕಂಡುಬಂದಿತು. ಇಬ್ಬನಿ ತೆರವಾದ ಬಳಿಕ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿತ್ತು.