ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ನಡುವೆ ನೇರ ಹಣಾಹಣಿ ಇದೆ. ಪರಿಶಿಷ್ಟ ಜಾತಿ ಎಡಗೈ (ಮಾದಿಗ) ಸಮುದಾಯದ ಜಿಗಜಿಣಗಿ ಏಳನೇ ಬಾರಿಗೆ (ಚಿಕ್ಕೋಡಿ, ವಿಜಯಪುರದಿಂದ ತಲಾ ಮೂರು ಬಾರಿ) ಲೋಕಸಭೆ ಚುನಾವವಣೆಯಲ್ಲಿ ಕಣಕ್ಕಿಳಿದಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ರಾಜಕೀಯ ವೈರಿಗಳು. ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್ ಶಾಸಕ ರಾಜುಗೌಡ ನಿಲುವು ನಿಗೂಢ. ಇವು ರಮೇಶ ಜಿಗಜಿಣಗಿ ಅವರ ಸುಗಮ ಗೆಲುವಿಗೆ ‘ಅಡ್ಡಗಲ್ಲು’ ಆದಿತೇ ಎಂಬ ಚರ್ಚೆ ನಡೆದಿದೆ.
ಪರಿಶಿಷ್ಟ ಜಾತಿ ಬಲಗೈ (ಚಲವಾದಿ) ಸಮುದಾಯಕ್ಕೆ ಸೇರಿದ ಪ್ರೊ.ರಾಜು ಆಲಗೂರ ಮೊದಲ ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಗಠಾಣ ಕ್ಷೇತ್ರದಿಂದ ಎರಡು ಬಾರಿ ಶಾಸಕ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ, ಕೆಎಸ್ಡಿಎಲ್ ಅಧ್ಯಕ್ಷ ಮತ್ತು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.
ಇಬ್ಬರು ಸಚಿವರು, ನಾಲ್ವರು ಶಾಸಕರು, ವಿಧಾನ ಪರಿಷತ್ತಿನ ಇಬ್ಬರು ಸದಸ್ಯರಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜಕೀಯವಾಗಿ ಪ್ರಬಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಆ ಪಕ್ಷವು ನೆಚ್ಚಿಕೊಂಡಿದೆ.
ವಿಜಯಪುರ ಜಿಲ್ಲಾ ರಾಜಕಾರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಿಲ್ಲ. ಒಳ ಒಪ್ಪಂದ, ಒಳ ಏಟು, ಹೊಂದಾಣಿಕೆ ರಾಜಕಾರಣಕ್ಕೆ ಹೆಸರಾಗಿದೆ. ಈ ಬಾರಿ ಯಾವ ರೀತಿ ರಾಜಕೀಯ ಆಟ ನಡೆಯಲಿದೆ ಎಂಬುದೇ ಸದ್ಯದ ಕುತೂಹಲ.
ವಿಜಯಪುರ ಲೋಕಸಭಾ ಕ್ಷೇತ್ರ
ನೇರ ಹಣಾಹಣಿ
ರಮೇಶ ಜಿಗಜಿಣಗಿ (ಬಿಜೆಪಿ)
ರಾಜು ಆಲಗೂರ (ಕಾಂಗ್ರೆಸ್)
ವಿಧಾನಸಭೆ ಕ್ಷೇತ್ರಗಳ ಪಕ್ಷವಾರು ಪ್ರಾತಿನಿಧ್ಯ: ಕಾಂಗ್ರೆಸ್–6;ಬಿಜೆಪಿ–1;ಜೆಡಿಎಸ್–1