ವಿಜಯಪುರ: ಕೊಳವೆಬಾವಿಯಲ್ಲಿ ಸಿಲುಕಿಕೊಂಡಿರುವ ಮಗುವಿನ ರಕ್ಷಣಾ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ತಲುಪಿದೆ.
ಕೆಲವೇ ಹೊತ್ತಿನಲ್ಲಿ ಮಗುವನ್ನು ಹೊರತರಲು ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಕ್ಷಣಾ ಸಿಬ್ಬಂದಿ ಮಗುವಿನ ಹತ್ತಿರಕ್ಕೆ ತಲುಪಿದ್ದು, ಮಗುವನ್ನು ತಲೆಯನ್ನು ಕೈಯಿಂದ ಮುಟ್ಟಿದ್ದಾರೆ.
ಮಗು ಜೀವಂತವಾಗಿದ್ದು, ಅಳುತ್ತಿರುವುವುದು ಕೇಳಿಸುತ್ತಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ ರವಿ ಭಜಂತ್ರಿ 'ಪ್ರಜಾವಾಣಿ' ಗೆ ಖಚಿತ ಪಡಿಸಿದರು.
ಮಗು ತಲೆ ಕೆಳಗಾಗಿ ಬಿದ್ದಿದ್ದು, ಹೊರ ತೆಗೆಯಲು ಮಗುವಿನ ಎರಡು ಭುಜಗಳಿಗೆ ಅಕ್ಕಪಕ್ಕದ ಕಲ್ಲುಗಳು ಅಡಚಣೆಯಾಗಿದೆ. ಈ ನಿಟ್ಟಿನಲ್ಲಿ ಅಡೆತಡೆ ನಿವಾರಣೆಗೆ ಸಿಬ್ಬಂದಿ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಆಸ್ಪತ್ರೆ ಗೆ ಕರೆದೊಯ್ಯಲು ಸಿದ್ಧತೆ:
ಮಗುವನ್ನು ಹೊರ ತೆಗೆದ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ಯಲು ವೈದ್ಯಕೀಯ ಸಿಬ್ಬಂದಿ ಅಂಬುಲೆನ್ಸ್ನೊಂದಿಗೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
ಅಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆ ಆಗದಂತೆ ಪೊಲೀಸರು ಜನ, ವಾಹನಗಳನ್ನು ತೆರವುಗೊಳಿಸುತ್ತಿದ್ದಾರೆ.