ವಿಜಯಪುರ: ‘ಯತ್ನಾಳ ಅವರು ವಿಶ್ವಗುರು, ದೇಶದ ಎನ್ಸೈಕ್ಲೋಪಿಡಿಯಾ. ಅವರಿಗೆ ಎಲ್ಲ ಮಾಹಿತಿ ಇರುತ್ತದೆ. ಯಾರ ಮೇಲೆ ಏನು ಬೇಕಾದರೂ ಮಾತನಾಡುವ ಹವ್ಯಾಸ ಅವರಿಗಿದೆ, ಹಾರಿಕೆ ಹೇಳಿಕೆ ನೀಡುವಲ್ಲಿ ನಿಸ್ಸೀಮರಿದ್ದಾರೆ’ ಎಂದು ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು.
‘ದಿಂಗಾಲೇಶ್ವರ ಶ್ರೀಗಳಿಗೆ ಹಣ ನೀಡಿ ಚುನಾವಣೆಗೆ ನಿಲ್ಲಿಸಲಾಗಿದೆ’ ಎಂಬ ಯತ್ನಾಳ ಆರೋಪಕ್ಕೆ ಉತ್ತರಿಸಿದ ಅವರು, ಯತ್ನಾಳರಿಗೆ ಒಳಗಿನ ವಿಚಾರಗಳು ಬಹಳ ಗೊತ್ತಿರುತ್ತದೆ. ಯಾರು ಕೊಡುತ್ತಾರೆ, ಹೇಗೆ ಕೊಡುತ್ತಾರೆ ಎಂಬುದು ಅವರಿಗೆ ಗೊತ್ತಿರುತ್ತದೆ. ₹500 ನೋಟು ಕೊಟ್ಟಿದ್ದಾರೋ, ₹ 2 ಸಾವಿರ ನೋಟು ಕೊಟ್ಟಿದ್ದಾರೋ ಅವರನ್ನೇ ಕೇಳಬೇಕು ಎಂದರು.
‘ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ’ ಎಂಬ ಯತ್ನಾಳ ಆರೋಪಕ್ಕೆ ಉತ್ತರಿಸಿದ ಸಚಿವರು, ಎನ್ಸಿಆರ್ಬಿ ವರದಿ ಪ್ರಕಾರ ದೇಶದಲ್ಲಿ 13.13 ಲಕ್ಷ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಗುಜರಾತ್ನಲ್ಲಿ ಪ್ರತಿ ದಿನ ಆರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಶಾಸಕ ಯತ್ನಾಳ ಗುಜರಾತ್ಗೆ ಹೋಗಬೇಕು, ಅಲ್ಲಿಯ ಸ್ಥಿತಿ ಬಗ್ಗೆ ಮಾತನಾಡಬೇಕು’ ಎಂದು ಸಚಿವ ಲಾಡ್ ಒತ್ತಾಯಿಸಿದರು.
‘ಹುಬ್ಬಳ್ಳಿಯ ನೇಹಾ ಕೊಲೆಯಾದಂತೆ ಸಂತೋಷ್ ಲಾಡ್ ಮನೆಯ ಹೆಣ್ಣು ಮಕ್ಕಳಿಗೂ ಆಗಬೇಕಿತ್ತು’ ಎಂದು ಶಾಸಕ ಯತ್ನಾಳ ಹೇಳಿಕೆ ನೀಡಿದ್ದಾರೆ. ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗಾಗಿ, ಯತ್ನಾಳಗೆ ಅನುಕೂಲ, ಖುಷಿ ಆಗಲಿದೆ ಎಂದರೆ ಆಗಲಿ ಬಿಡಿ ಎಂದರು.
‘ಚುನಾವಣಾ ಬಾಂಡ್ ಬಗ್ಗೆ ಯತ್ನಾಳ ಸಾಹೇಬ ಏಕೆ ಮಾತನಾಡಿಲ್ಲ’ ಎಂದು ಪ್ರಶ್ನಿಸಿದರು.