ವಿಜಾಪುರ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 721ಆಯುಷ್ ವೈದ್ಯರು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿ ದ್ದಾರೆ. ಅವರಲ್ಲಿ 60 ಜನರಿಗೆ ಮಾಸಿಕ ₨ 26,000 ಸಂಬಳ ನೀಡುತ್ತಿದ್ದರೆ, ಇನ್ನುಳಿದ 661 ಜನ ವೈದ್ಯರಿಗೆ ಕೊಡುತ್ತಿರುವುದು ಕೇವಲ ₨ 13,000!
‘ವೈದ್ಯರ ಕೊರತೆ ನೀಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರಾಜ್ಯ ಸರ್ಕಾರ 2006ರಲ್ಲಿ ಆಯುಷ್ ವೈದ್ಯರನ್ನು ನೇಮಿಸಿಕೊಂಡಿದೆ. ಸಮಾನ ಹುದ್ದೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ರಾಜ್ಯ ಸರ್ಕಾರವೇ ವೇತನ ತಾರತಮ್ಯ ಮಾಡುತ್ತಿರುವುದರಿಂದ ನಮ್ಮ ಮನೋಬಲವೇ ಕುಸಿದು ಹೋಗಿದೆ’ ಎಂದು ಈ ವೈದ್ಯರು ದೂರುತ್ತಾರೆ.
‘ಅಲೋಪತಿ ವೈದ್ಯರು ಸೇವೆಗೆ ಬರುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಆ ಹುದ್ದೆಗಳಿಗೆ ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿತ್ತು. 2007ರಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್ಆರ್ ಎಚ್ಎಂ) ರಾಜ್ಯದಲ್ಲೂ ಜಾರಿಗೆ ಬಂತು. ಈ 661 ಆಯುಷ್ ವೈದ್ಯ ರನ್ನು ಎನ್ಆರ್ಎಚ್ಎಂಗೆ ವರ್ಗಾ ಯಿಸಲಾಯಿತು. ಇದುವೇ ಸಮಸ್ಯೆಯ ಮೂಲ’ ಎನ್ನುತ್ತಾರೆ ಕರ್ನಾಟಕ ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾಭಿ ವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಪಿ.ಬಿ. ಹಂಪನಗೌಡ್ರು.
‘60 ಆಯುಷ್ ವೈದ್ಯರು ರಾಜ್ಯ ಲೆಕ್ಕ ಶೀರ್ಷಿಕೆಯಲ್ಲಿ (ಖಾಲಿ ಇರುವ ಎಂ.ಬಿ.ಬಿ.ಎಸ್ ವೈದ್ಯರ ಹುದ್ದೆಗಳಲ್ಲಿ) ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಆರನೇ ವೇತನ ಆಯೋಗದ ಪ್ರಕಾರ ಮಾಸಿಕ ₨ 26,000 ವೇತನ ನೀಡುತ್ತಿದ್ದೇವೆ. ನೀವು ಕೇಂದ್ರ ಸರ್ಕಾರದ ಯೋಜನೆಯಲ್ಲಿ ಸೇವೆಯಲ್ಲಿ ರುವುದರಿಂದ ಈ ಮಾನದಂಡ ನಿಮಗೆ ಅನ್ವಯಿಸದು ಎಂಬ ಸಬೂಬನ್ನು ಇಲಾಖೆಯವರು ನೀಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
‘6ನೇ ವೇತನ ಆಯೋಗದ ಶಿಫಾರ ಸಿನಂತೆ ಆಯುಷ್ ವೈದ್ಯರ ಮೂಲ ವೇತನ ₨ 26,000. ಗುತ್ತಿಗೆ ಆಧಾರಿತ ನೌಕರರಿಗೆ ಆ ಹುದ್ದೆಯ ಮೂಲ ವೇತನವನ್ನು ಮಾತ್ರ ನೀಡಲಾಗುತ್ತದೆ. ಅದೇ ರೀತಿ ನಮಗೂ ₨ 26,000 ವೇತನ ನೀಡಬೇಕು’ ಎಂಬುದು ಸಂಘದ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಸ್.ಐ. ಮೇತ್ರಿ, ಸಂಘದ ಮುಖಂಡ ಡಾ.ಆರ್.ಸಿ. ಪಾಟೀಲ ಅವರ ಮನವಿ.
‘ರಾಜ್ಯದಲ್ಲಿ 200ಕ್ಕಿಂತ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರೇ ಆಯುಷ್ ವೈದ್ಯರು ಸ್ವತಂತ್ರವಾಗಿ ಕಾರ್ಯನಿರ್ವಹಿಸು ತ್ತಿದ್ದು, ಆಸ್ಪತ್ರೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಡಿ ದರ್ಜೆ ಸಿಬ್ಬಂದಿ ನಮಗಿಂತ ಸರಾಸರಿ ₨10,000 ಹೆಚ್ಚಿಗೆ ವೇತನ ಪಡೆಯುತ್ತಿದ್ದಾರೆ. ಎಂಟು ವರ್ಷವಾದರೂ ನಮ್ಮ ಸೇವೆ ಕಾಯಂ ಗೊಳಿಸಿಲ್ಲ. ನಮ್ಮಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರೂ ವೇತನ ನೀಡದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ’ ಎಂಬುದು ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಜಿ.ಎನ್. ಜಹಗೀರದಾರ ಅವರ ಅಸಮಾಧಾನ.
‘ಎನ್ಆರ್ಎಚ್ಎಂ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಆಯುಷ್ ವೈದ್ಯರಿಗೆ ಗುಜರಾತ್ನಲ್ಲಿ ₨35,000, ರಾಜಸ್ತಾನದಲ್ಲಿ ₨31,000, ಕೇರಳದಲ್ಲಿ ₨ 34,000 ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ನಮ್ಮ ವೇತನ ಹೆಚ್ಚಿಸಿ ಪ್ರಸ್ತಾವ ಸಲ್ಲಿಸಿದರೆ ಕೇಂದ್ರ ಸರ್ಕಾರ ಅದಕ್ಕೆ ಬೇಕಿರುವ ಅನುದಾನ ನೀಡುತ್ತದೆ. ಎಷ್ಟು ವಿನಂತಿಸಿದರೂ ರಾಜ್ಯ ಸರ್ಕಾರ ಈ ಪ್ರಸ್ತಾವವನ್ನೇ ಕೇಂದ್ರಕ್ಕೆ ಸಲ್ಲಿಸುತ್ತಿಲ್ಲ’ ಎಂದು ಅವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.