ವಿಜಾಪುರ: `ಇಲ್ಲಿಯ ಸೈನಿಕ ಶಾಲೆಯಲ್ಲಿ ವಿಜ್ಞಾನ ಚಟುವಟಿಕೆಗೆ ಉತ್ತೇಜನ ನೀಡಲು ರೂ.20 ಲಕ್ಷ ಅನುದಾನ ನೀಡಲಾಗುವುದು' ಎಂದು ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಎಸ್.ಆರ್. ಪಾಟೀಲ ಭರವಸೆ ನೀಡಿದರು.
ನಗರದ ಸೈನಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.`ಸರ್ಕಾರ ನೀಡುವ ಈ ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ ಮತ್ತು ವೈಜ್ಞಾನಿಕ ಚಟುವಟಿಕೆಗೆ ಉತ್ತೇಜನ ನೀಡಬೇಕು ಎಂದರು.
`ಸೈನಿಕ ಶಾಲೆ ಶಿಸ್ತಿಗೆ ಹೆಸರುವಾಸಿ. ಇಲ್ಲಿಯ ಶಿಸ್ತು ಇತರ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಇರಬೇಕಾಗಿರುವುದು ಅವಶ್ಯ' ಎಂದು ಹೇಳಿದರು. ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಮಾಜಿ ಸಚಿವ ಅಜಯ್ಕುಮಾರ ಸರನಾಯಕ, ಶಾಲೆಯಲ್ಲಿ ಸ್ಥಾಪಿಸಿರುವ ನೀರು ಶುದ್ಧೀಕರಣ ಘಟಕಗಳನ್ನು ಉದ್ಘಾಟಿಸಿದರು. ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಕರ್ನಲ್ ರಿಷಿರಾಜ್ ಸಿಂಗ್, ಕುಲಸಚಿವ ಇ.ಶ್ರೀನಿವಾಸ ಇತರರು ಪಾಲ್ಗೊಂಡಿದ್ದರು.
ಅನುದಾನ ಕಡಿಮೆ ಇಲ್ಲ: ಬಜೆಟ್ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕಡಿಮೆ ಅನುದಾನ ನೀಡಲಾಗಿದೆ ಎಂಬ ಆರೋಪ ಸುಳ್ಳು. ಕೇವಲ ಆರು ತಿಂಗಳ ಅವಧಿಗೆ ನಮ್ಮ ಸರ್ಕಾರ ನೀರಾವರಿಗೆ ಅಂದಾಜು 10 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ನೀರಾವರಿ ಯೋಜನೆಗಳಿಗೇ ಹೆಚ್ಚಿನ ಹಣ ವಿನಿಯೋಗವಾಗಲಿದೆ. ಮುಂಬರುವ ವರ್ಷಗಳಲ್ಲಿ ನೀರಾವರಿಗೆ ಹೆಚ್ಚಿನ ಅನುದಾನ ನೀಡಿ ಐದು ವರ್ಷಗಳಲ್ಲಿ ರಾಜ್ಯದ ಸಮಗ್ರ ನೀರಾವರಿಗೆ ನಮ್ಮ ಸರ್ಕಾರ ಬದ್ಧ ಎಂದು ಸಚಿವ ಪಾಟೀಲ ಪ್ರತಿಕ್ರಿಯಿಸಿದರು.