ಗುರುಮಠಕಲ್ (ಯಾದಗಿರಿ ಜಿಲ್ಲೆ): ಪಟ್ಟಣದ ಲಕ್ಷ್ಮೀನಗರ ಬಡಾವಣೆಯಲ್ಲಿ ಶಾರ್ಟ್ ಸರ್ಕಿಟ್ ನಿಂದಾಗಿ ₹1.75 ಲಕ್ಷ ನಗದು ಹಣ ಸೇರಿದಂತೆ ಒಟ್ಟು ₹6 ಲಕ್ಷ ಮೌಲ್ಯದ ಆಸ್ತಿ ಬೆಂಕಿಗಾಹುತಿಯಾದ ಘಟನೆ ಶನಿವಾರ ಜರುಗಿದೆ.
ಪಟ್ಟಣದ ಲಕ್ಷ್ಮೀನಗರ ಬಡಾವಣೆಯ ನಿವಾಸಿ ರೇಣುಕಾ ಗೋಪಾಲ್ ಅವರು ಬೆಳಿಗ್ಗೆ ಕೂಲಿ ಕೆಲಸಕ್ಕಾಗಿ ಮನೆಗೆ ಬೀಗ ಹಾಕಿ ಹೋಗಿದ್ದರು. ಮಧ್ಯಾಹ್ನ ಶಾರ್ಟ್ ಸರ್ಕಿಟ್ ಉಂಟಾಗಿ ಟಿ.ವಿ ಸುಟ್ಟಿದೆ. ಟಿವಿಯಿಂದ ಬೆಂಕಿ ಪಕ್ಕದ ಪುಸ್ತಕಗಳು, ಅಲ್ಮರಾ ಸೇರಿದಂತೆ ವಿದ್ಯುತ್ ವೈರ್ ಮೂಲಕ ಇಡೀ ಮನೆಗೆ ಹಬ್ಬಿದೆ.
ಮನೆಯಲ್ಲಿದ್ದ 30 ಗ್ರಾಂ. ಚಿನ್ನ, 80 ಗ್ರಾಂ. ಬೆಳ್ಳಿ, ಜೋಳ, ಅಕ್ಕಿ, ಬಟ್ಟೆ, ಟಿವಿ, ಫ್ಯಾನ್, ಮನೆಯ ಮತ್ತು ಮಕ್ಕಳ ಶಾಲಾ ದಾಖಲಾತಿಗಳು, ರೇಷನ್ ಹಾಗೂ ಆಧಾರ್ ಕಾರ್ಡುಗಳು ಸುಟ್ಟಿದ್ದು, ಮನೆಯ ಪತ್ರಾಸ್ ಮೇಲ್ಛಾವಣೆ ಬೆಂಕಿಗೆ ಆಹುತಿಯಾಗಿವೆ.
ಹೊಗೆ ಬರುತ್ತಿರುವುದನ್ನು ಕಂಡ ಬಡಾವಣೆ ನಿವಾಸಿಗಳು ಕೂಡಲೇ ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಮನೆಯ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಿ, ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ವಿಜಯ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.